ಸಿಎಂ ಸಿದ್ದರಾಮಯ್ಯಗೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮನವಿ. ಪಂಚಮಸಾಲಿಗಳನ್ನು 2 ಎ ಗೆ ಸೇರಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಎಚ್ಚರಿಕೆ
ಬೆಂಗಳೂರು:
ಬೆಳಗಾವಿಯಲ್ಲಿ ಪಂಚಮಸಾಲಿ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎ ಮೀಸಲಾತಿಗೆ ಸೇರ್ಪಡೆ ಮಾಡಬೇಕು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದರೆ, ಇತ್ತ ಪಂಚಮ ಸಾಲಿಗಳ ಬೇಡಿಕೆಯನ್ನು ಪರಿಗಣಿಸಬಾರದೆಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಮಾಡಿದೆ.
ರಾಜ್ಯದಲ್ಲಿ 2002 ರಿಂದ ಹಿಂದುಗಳಿದ ವರ್ಗಳಲ್ಲಿ ಪ್ರವರ್ಗ 2 ಎ, 2 ಬಿ, 3 ಎ, ಮತ್ತು 3 ಬಿ ಎಂಬುದಾಗಿ ವಿಂಗಡಿಸಿ ಪ್ರವರ್ಗ 1ಕ್ಕೆ ಶೇ.4, ಪ್ರವರ್ಗ 2 ಎ ಶೇ.15, 2 ಬಿ ಶೇ.4 ಹಾಗೂ 3 ಎ ಶೇ.4, 3 ಬಿ ಗೆ ಶೇ5. ಸೇರಿ ಒಟ್ಟು ಶೇ.32 ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಲಾಗಿದೆ. ಇದು 2002 ರಿಂದ ಜಾರಿಯಲ್ಲಿದೆ. ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತರು ಪ್ರವರ್ಗ 3 ಬಿ ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಸರಕಾರದ ಮೇಲೆ ಒತ್ತಡ.
ಈ ಸಮುದಾಯವನ್ನು ಪ್ರವರ್ಗ 2 ಎ ಗೆ ಬದಲಾಯಿಸಿ ಮೀಸಲಾತಿ ಕೊಡಬೇಕು ಎಂಬ ಬೇಡಿಕೆ ಇದೆ. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ ಹಿಂದಿನ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿ ಪ್ರವರ್ಗ 2 ಡಿ ಸೃಷ್ಟಿಸಿ 2 ಡಿಗೆ ಶೇ.7 ಮೀಸಲಾತಿ ನೀಡಿ ಆದೇಶ ಮಾಡಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಇದೆ. ಈ ನಡುವೆ ಪಂಚಮ ಸಾಲಿಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಪಂಚಮಸಾಲಿ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದ ಸಮುದಾಯವಾಗಿದೆ. ಹಾವನೂರು ಆಯೋಗ, ಡಾ.ನಾಗನಗೌಡ ಸಮಿತಿ, ಓ ಚಿನ್ನಪ್ಪರೆಡ್ಡಿ ವರದಿ ಕೂಡಾ ಇದನ್ನು ಉಲ್ಲೇಖಿಸಿದೆ. ಹೀಗಾಗಿ ಈ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರ್ಪಡೆ ಮಾಡಿದರೆ ಈ ಪ್ರವರ್ಗದಲ್ಲಿರುವ ಅಗಸ, ಸವಿತಾ, ತಿಗಳ, ಈಡಿಗ, ಕುರುಬ, ದೇವಾಂಗ ಹಾಗೂ ಇತರರಿಗೆ ಮೀಸಲಾತಿ ಸಿಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಹಿಂದುಳಿದ ಜಾತಿ ಒಕ್ಕೂಟ ಹೇಳಿದೆ.
—-
ಉಗ್ರ ಪ್ರತಿಭಟನೆ ಎಚ್ಚರಿಕೆ
ಪಂಚಮಸಾಲಿಗಳನ್ನು 2 ಎ ಗೆ ಸೇರಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ನೀಡಿದೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆಯ ಪ್ರಮುಖರು ಭೇಟಿ ಮಾಡಿ ಮನವಿಯನ್ನೂ ನೀಡಿದ್ದಾರೆ.
ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ತೀವ್ರ ಹೋರಾಟ ನಡೆದಿತ್ತು. ಪಂಚಮಸಾಲಿ ಹೋರಾಟಗಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಅವರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದರು.
ಪ್ರತಿಭಟನೆ ಹಿಂಸಾಚಾರದ ಸ್ವರೂಪವನ್ನು ಪಡೆದುಕೊಂಡ ಸಂದರ್ಭದಲ್ಲಿ ಹಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.