ದಾವಣಗೆರೆ : ಲೋಕಸಭಾ ಚುನಾವಣಾ ಹೊತ್ತಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡೋ ವೇಳೆ ಇಷ್ಟು ಕೆಳಮಟ್ಟಕ್ಕೆ ಇಳಿದ್ಯಾಕೆ.? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಆಸ್ತಿ ಹಂಚಿಕೆ ಮಾಡುತ್ತಾರೆ, ಮಹಿಳೆಯರ ಮಾಂಗಲ್ಯವನ್ನು ಮುಸ್ಲಿಂಮರಿಗೆ ಕೊಡುತ್ತಾರೆ ಅನ್ನೋ ಗಂಭೀರ ಆರೋಪ ಮಾಡಿದ್ದೇಕೆ..? ಪುಂಗಿ ಊದೋಕೆ ಪ್ರಧಾನಿಗಳಿಗೆ ಇಂಥಾ ವಿಷ್ಯನೇ ಬೇಕಾ..? ಇದೇನಾ ಮೋದಿ ಹೇಳೋ ‘ಸಬ್ ಕಾ ಸಾತ್.. ಸಬ್ ಕಾ ವಿಕಾಸ್’..? ಅಷ್ಟಕ್ಕೂ ಏನಿದು ಪ್ರಧಾನಿ ಮೋದಿ ಅವರ ಅಸಲಿ ಲಾಜಿಕ್ ಅಂದ್ರಾ.?
ಪ್ರಧಾನಿ ಮೋದಿ ಅವರು ತುಂಬಾ ನಾಜೂಕಾಗಿ, ತುಂಬಾ ವ್ಯವಸ್ಥಿತವಾಗಿ ಸುಳ್ಳು ಹೇಳ್ತಾಯಿದ್ದಾರಾ..? ಎಲೆಕ್ಷನ್ಗೆ ಮೊದ್ಲು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ. ಆದ್ರೆ ಎಲೆಕ್ಷನ್ ಹೊಸ್ತಿಲಲ್ಲಿ ಮಾತ್ರ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರನ್ನ ತೆಗಳಿ ಹಿಂದೂಗಳನ್ನ ಹೊಗಳುತ್ತಾ.? ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾಯಿದ್ದಾರೆ.. ಹಾಗಾದ್ರೆ ಪ್ರಧಾನಿ ಮೋದಿ ಒಂದು ಸಮುದಾಯದ ಒಂದು ಧರ್ಮದ ಪ್ರಧಾನಮಂತ್ರಿಯಾ..? ಹಾಗಾದ್ರೆ ಭಾರತ ದೇಶವನ್ನ ಜಾತ್ಯಾತೀತ ರಾಷ್ಟ್ರ ಅಂತ ಕರೆಯೋದ್ಯಾಕೆ.? ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತೇಳೋದ್ಯಾಕೆ.? ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಅಂತೇಳಿ ಎದೆಯುಬ್ಬಿಸಿ ಹೇಳಿಕೊಳ್ಳೋದ್ಯಾಕೆ..? ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತೋದೇ ಸಮಾನತೆಯಾ ಅನ್ನೋ ಪ್ರಶ್ನೆಗಳು ಇದೀಗ ಕಾಡ್ತಾಯಿವೆ.
ಹೌದು ಓದುಗರೇ, ಉತ್ತರ ಪ್ರದೇಶದ ಅಲಿಘರ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ಕಾಂಗ್ರೆಸ್ ಮುಸ್ಲಿಮರ ಓಲೈಕೆ ರಾಜಕಾರಣ ಮಾಡಿದೆಯೇ ಹೊರತು ಅವರನ್ನು ಉದ್ಧಾರ ಮಾಡಿಲ್ಲ. ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಏನನ್ನೂ ಮಾಡಿಲ್ಲ. ಗಲಭೆಗಳು, ಕೊಲೆಗಳು, ಗ್ಯಾಂಗ್ ವಾರ್ಗಳು ಸಮಾಜವಾದಿ ಪಕ್ಷದ ಸರ್ಕಾರದ ಗುರುತಾಗಿದ್ದವು ಅಂತೇಳಿ ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು.
ಅಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ, ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಇದನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣದ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದು ಕಾನೂನಿನಿಂದ ರಕ್ಷಿಸಲ್ಪಟ್ಟಿದೆ. ಅವರು ನಮ್ಮ ತಾಯಂದಿರು ಮತ್ತು ಸಹೋದರಿಯರ ಆಸ್ತಿ ಮತ್ತು ಮಂಗಳಸೂತ್ರವನ್ನು ಕಸಿದುಕೊಳ್ಳಲು ಕಾನೂನನ್ನು ತಿದ್ದುಪಡಿ ಮಾಡಲು ಬಯಸುತ್ತಾರೆ ಎಂದು ಮೋದಿ ಪುಗಸಟ್ಟೆ ಆರೋಪ ಮಾಡಿದ್ದಾರೆ.
ಹಾಗಾದ್ರೆ ಪ್ರಧಾನಿ ಮೋದಿ ಹಿಂದೂಗಳ ಓಲೈಕೆ ರಾಜಕಾರಣ ಮಾಡ್ತಾಯಿಲ್ವಾ..? ಹಿಂದೂಗಳ ಹೆಸರಲ್ಲಿ ಗೆದ್ದು ಪ್ರಧಾನಿಯಾಗೋ ಮೋದಿ ಕಳೆದ 10 ವರ್ಷಗಳಲ್ಲಿ ಹಿಂದೂಗಳಿಗಾಗಿ ಏನ್ ಮಾಡಿದ್ದಾರೆ.? ಹಿಂದೂಗಳ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಏನನ್ನ ಮಾಡಿದ್ದಾರೆ.? ದೇಶದ ಕೆಲ ರಾಜ್ಯಗಳಲ್ಲಿ ಗಲಭೆಗಳು, ಕೊಲೆಗಳು, ಗ್ಯಾಂಗ್ ವಾರ್ಗಳು ನಡೆಯುತ್ತಿವೆ ಅನ್ನೋ ಆರೋಪ ಇದೆ. ಎಲೆಕ್ಷನ್ ಟೈಮಲ್ಲಿ ಹಿಂದೂಗಳ ಭಾವನೆ ಕೆರಳಿಸೋವಂತಾ ಹೇಳಿಕೆಗಳನ್ನ ಕೊಡೋದೇ ಬಿಜೆಪಿ ರಾಜಕಾರಣವಾ ಅನ್ನೋದನ್ನ ಜನ ಸಾಮಾನ್ಯರು ಅರ್ಥ ಮಾಡ್ಕೋಬೇಕಾಗಿದೆ.
ಇನ್ನ ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಿಎಂ ಸಿದ್ರಾಮಯ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಆಸ್ತಿ ಹಂಚಿಕೆ ಮಾಡುತ್ತಾರೆ, ಮಹಿಳೆಯರ ಮಾಂಗಲ್ಯವನ್ನು ಮುಸ್ಲಿಂ ಮರಿಗೆ ಕೊಡುತ್ತಾರೆ ಎಂದು ಪ್ರಧಾನಮಂತ್ರಿ ಆರೋಪ ಮಾಡಿದ್ದಾರೆ. ಪ್ರಧಾನಿಯಾಗಿ ಅವರು ಇಷ್ಟು ಕೆಳಮಟ್ಟದಲ್ಲಿ ಮಾತನಾಡ ಬಾರದಿತ್ತು. ಹಿಂದೂಗಳ ಮಂಗಳಸೂತ್ರವನ್ನು ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎನ್ನುವುದು ಅವರ ಸ್ಥಾನಕ್ಕೆ ಅಗೌರವ ತರುವಂಥ ಮಾತುಗಳು ಅಂತೇಳಿ ಸಿದ್ದ ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದ ಪ್ರಧಾನ ಮಂತ್ರಿಯಾಗಿ ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿಕೊಳ್ಳುವ ಕರ್ತವ್ಯ ಅವರದ್ದು. ಇಂಥ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಸಮಾನವಾಗಿ ಆಸ್ತಿ ಹಂಚಿಕೆಯಾಗುವುದು ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣವಾಗಬೇಕಾದರೆ ಎಲ್ಲಾರೂ ಮುಖ್ಯವಾಹಿನಿಗೆ ಬರಬೇಕು. ಕೆಲವೇ ಜನರ ಕೈಯಲ್ಲಿ ಅಧಿಕಾರ, ಸಂಪತ್ತು ಇದ್ದರೆ ಇದು ಆಗುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅಸಮಾನತೆ ಹೋಗಬೇಕಾದರೆ ಅಧಿಕಾರ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಇರಬಾರದು, ಹಂಚಿಕೆಯಾಗಬೇಕೆಂದು ಹೇಳಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಮಗೆ ನಂಬಿಕೆ ಇದೆ ಅಂತೇಳಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಗಾದ್ರೆ ದೇಶದ 140 ಕೋಟಿ ಜನರನ್ನ ಪ್ರತಿನಿಧಿಸೋ ಪ್ರಧಾನಿ ಮೋದಿ ಎಲೆಕ್ಷನ್ ಹೊಸ್ತಿಲಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ಹುಳಿ ಹಿಂಡೋವಂತಾ ಹೇಳಿಕೆ ಕೊಡೋದು ಎಷ್ಟು ಸರಿ..? ಇವರು ಹೇಳೋ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅನ್ನೋ ಮಾತು ಕೇವಲ ಬೊಗಳೆಯಾ..?