ದಾವಣಗೆರೆ : ಪ್ರಜ್ವಲ್ ತಪ್ಪು ಸಾಬೀತಾದ್ರೆ ಏನ್ ಶಿಕ್ಷೆ ಗೊತ್ತಾ?ಹೇಗಿದೆ ದಳಪತಿಗಳ ಕಾನೂನು ಹೋರಾಟದ ಸಿದ್ಧತೆ?
ಹಾಸನದ ಹಾಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಅತ್ಯಂತ ಗಂಭೀರ ಆರೋಪ ಕೇಳಿಬಂದಿದೆ. ಇವರು ಹತ್ರತ್ರ 2000ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ..
ಇದು ದೇಶದಲ್ಲೇ ಅತಿದೊಡ್ಡ ಲೈಂಗಿಕ ಹಗರಣ ಅಂತೇಳಿ ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಮತ್ತೊಂದು ಕಡೆ ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವ ಬಿಜೆಪಿಯು, ಅವರು ಪರಾರಿಯಾಗಲು ಸಹಾಯ ಮಾಡುತ್ತಿದೆ ಅಂತೇಳಿ ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ ಜರ್ಮನಿಯಲ್ಲಿರೋ ಪ್ರಜ್ವಲ್ ಭಾರತಕ್ಕೆ ವಾಪಸ್ ಆದ ಮರು ಕ್ಷಣವೇ ಅರೆಸ್ಟ್ ಆಗ್ತಾರಾ.? ಪ್ರಜ್ವಲ್ ತಪ್ಪು ಸಾಬೀತಾದ್ರೆ ಏನ್ ಶಿಕ್ಷೆ ಗೊತ್ತಾ?
ಸಾವಿರಾರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತೇಳಿ ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಪ್ರಸಾದ್ ಕೂಡ ಈ ಬಗ್ಗೆ ಕಿಡಿಕಾರಿದ್ದು, ‘ಕರ್ನಾಟಕದಲ್ಲಿ ನಡೆದಿರುವ ಲೈಂಗಿಕ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸುತ್ತಿರುವುದೇಕೆ? ಬಿಜೆಪಿ ನಾಯಕರ ‘ಬೇಟಿ ಬಚಾವೋ–ಬೇಟಿ ಪಡಾವೋ’ ಘೋಷಣೆ ಏನಾಯಿತು? ಅಂದಾಜು 2,500 ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಯು ಜರ್ಮನಿಗೆ ಪರಾರಿಯಾಗಲು ಕೇಂದ್ರದ ಬಿಜೆಪಿ ಸರ್ಕಾರ ನೆರವಾಗಿದೆ’ ಅಂತೇಳೀ ವಾಗ್ದಾಳಿ ನಡೆಸಿದ್ದಾರೆ. ‘ಮಣಿಪುರ ಘಟನೆ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಮೌನವಹಿಸಿದ್ದ ಪ್ರಧಾನಿಯು, ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಯೊಂದಿಗೆ ಕರ್ನಾಟಕದಲ್ಲಿ ವೇದಿಕೆ ಹಂಚಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದು ಎಲ್ಲರಿಗೂ ತಿಳಿದ ವಿಚಾರವೇ’ ಅಂತಾನೂ ಕುಟುಕಿದ್ದಾರೆ.. ಈ ನಡುವೆ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿದೆ. ದೂರು ನೀಡಿರುವ ಮಹಿಳೆ ಈ ಹಿಂದೆ ಹೆಚ್.ಡಿ.ರೇವಣ್ಣರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಆಗ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ ತಮ್ಮ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರೆಂದು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 354 ಎ, 354 ಡಿ, 506, 509 ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವೀಗ ಎಸ್ಐಟಿಗೆ ವರ್ಗಾವಣೆಯಾಗಿದ್ದು, ತನಿಖೆ ಕೈಗೆತ್ತಿಕೊಂಡಿದೆ.
ಇನ್ನು ಪ್ರಜ್ವಲ್ ರೇವಣ್ಣರಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೆನ್ ಡ್ರೈವ್ ನಲ್ಲಿಟ್ಟು ಚುನಾವಣೆಗೆ ಮುನ್ನ ಹಾಸನದಲ್ಲಿ ಹಂಚಲಾಗಿದೆ. ಈ ಪೆನ್ ಡ್ರೈವ್ ಗಳಲ್ಲಿ ಪ್ರಜ್ವಲ್ ರೇವಣ್ಣರ ಅಶ್ಲೀಲ ದೃಶ್ಯಗಳಿದ್ದು, ಅದರಲ್ಲಿ ಮಹಿಳೆಯರ ಅಶ್ಲೀಲ ದೃಶ್ಯಾವಳಿಗಳೂ ಇವೆ. ಈ ದೃಶ್ಯಾವಳಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಈ ದೃಶ್ಯಾವಳಿಯಲ್ಲಿರುವ ಮಹಿಳೆಯರು ಈವರೆಗೂ ಯಾವುದೇ ದೂರು ನೀಡಿಲ್ಲ. ಈಗ ದೂರು ನೀಡಿರುವ ಮಹಿಳೆಗೂ ಪೆನ್ ಡ್ರೈವ್ ನಲ್ಲಿರುವ ದೃಶ್ಯಗಳಿಗೂ ಸಂಬಂಧವಿಲ್ಲ. ಅಲ್ಲದೇ ಪ್ರಕರಣದಲ್ಲಿ ದಾಖಲಾದ ಸೆಕ್ಷನ್ ಗಳೆಲ್ಲವೂ ಜಾಮೀನು ಕೊಡಬಹುದಾದ ಸೆಕ್ಷನ್ ಗಳಾಗಿವೆ. ಹೀಗಾಗಿ ಹೆಚ್.ಡಿ.ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆದು ತನಿಖೆ ನಡೆಸಬಹುದು. ತನಿಖೆ ವೇಳೆ ಬಂಧಿಸಿದರೂ ಜಾಮೀನು ನೀಡಬಹುದಾದ ಅಪರಾಧವಾಗಿರುವುದರಿಂದ ಶೀಘ್ರ ಜಾಮೀನು ಸಿಗುವ ಸಾಧ್ಯತೆ ಹೆಚ್ಚು.
ಒಂದು ವೇಳೆ ದೃಶ್ಯಾವಳಿಯಲ್ಲಿರುವ ಮಹಿಳೆಯರಲ್ಲಿ ಯಾರಾದರೂ ಇದೊಂದು ಲೈಂಗಿಕ ಹಲ್ಲೆ ಅಥವಾ ಅತ್ಯಾಚಾರವೆಂದು ದೂರು ನೀಡಿದರೆ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಆಗ ಬಂಧನದ ಸಾಧ್ಯತೆಯೂ ಹೆಚ್ಚಲಿದೆ. ಈ ಮಧ್ಯೆ ಮಹಿಳೆಯರ ಅಶ್ಲೀಲ ದೃಶ್ಯ ಚಿತ್ರೀಕರಿಸುವುದಾಗಲೀ, ಹಂಚುವುದಾಗಲೀ ಮಾಡುವುದೂ ಕೂಡಾ ಕಾನೂನಿನಲ್ಲಿ ಅಪರಾಧವಾಗಲಿದೆ. ಏಕೆಂದರೆ ಮಹಿಳೆಯರ ದೃಶ್ಯಗಳನ್ನು ಮಸುಕು ಮಾಡದೇ ಅವರ ಗುರುತು ಪತ್ತೆಯಾಗುವ ರೀತಿಯ ದೃಶ್ಯಾವಳಿಗಳನ್ನು ಹಂಚಿಕೆ ಮಾಡಲಾಗಿದೆ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ ವ್ಯಾಪ್ತಿಯಲ್ಲಿ ಅಪರಾಧವಾಗಿದ್ದು, ಈ ಅಪರಾಧ ಮಾಡಿದವರನ್ನು ಬಂಧಿಸುವ ಸಾಧ್ಯತೆಯೂ ಇರಲಿದೆ. ಹೀಗಾಗಿ ಎಸ್ಐಟಿ ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ತನಿಖೆ ಆರಂಭಿಸುವ ಮುನ್ನ ಈ ದೃಶ್ಯಾವಳಿಗಳ ಮೂಲವೇನು, ಇವುಗಳ ಸತ್ಯಾಸತ್ಯತೆ ಬಗ್ಗೆಯೂ ಪೊಲೀಸರು ವಿಧಿವಿಜ್ಞಾನ ತಜ್ಞರಿಂದ ವರದಿ ಪಡೆಯಬೇಕಾಗಲಿದೆ. ನಂತರ ಸಂತ್ರಸ್ತರೆಂದು ಕಂಡು ಬಂದವರ ಹೇಳಿಕೆ ಪಡೆಯಲೂ ಅವಕಾಶವಿದೆ. ಇನ್ನು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದರಿಂದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುವುದು ತಡವಾದರೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಆರೋಪ ಸಾಬೀತಾದರೆ ಶಿಕ್ಷೆ ಏನು?
ಸೆಕ್ಷನ್ 354 ಎ ಲೈಂಗಿಕ ವಾಂಛೆಗಳನ್ನು ವ್ಯಕ್ತಪಡಿಸಿ ದೇಹವನ್ನು ಸ್ಪರ್ಶಿಸುವುದು ಅಪರಾಧವಾಗಿದ್ದು, ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಸೆಕ್ಷನ್ 506 ಜೀವ ಬೆದರಿಕೆ, ಆರೋಪ ಸಾಬೀತಾದರೆ 2 ವರ್ಷಗಳವರೆಗೆ ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ. ಸೆಕ್ಷನ್ 509 ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಖಾಸಗಿತನವನ್ನು ಉಲ್ಲಂಘಿಸುವುದು ಅಪರಾಧವಾಗಿದ್ದು, ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ.
ಇನ್ನು ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಅಥವಾ ಉಚ್ಚಾಟನೆ ಮಾಡಿದರೂ ಅದು ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಜಯಗಳಿಸಿದರೆ, ಪಕ್ಷದಿಂದ ಉಚ್ಚಾಟನೆಯಾದರೂ ಲೋಕಸಭಾ ಸದಸ್ಯತ್ವ ಉಳಿಯಲಿದೆ. ಲೋಕಸಭಾ ಚುನಾವಣೆಯಲ್ಲಿ ಸೋತರೆ ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ ಮಂಕಾಗಲಿದೆ. ಸದ್ಯದ ಮಟ್ಟಿಗೆ ಪ್ರಜ್ವಲ್ ರೇವಣ್ಣ ಮೇಲೆ ಒಂದು ಎಫ್ಐಆರ್ ದಾಖಲಾಗಿದ್ದು, ದೃಶ್ಯಾವಳಿಯಲ್ಲಿರುವ ಯಾವುದೇ ಮಹಿಳೆ ಲೈಂಗಿಕ ಹಲ್ಲೆ, ಅಥವಾ ಅತ್ಯಾಚಾರದ ದೂರು ನೀಡಿದರೆ ಆಗ ಪ್ರಜ್ವಲ್ ರೇವಣ್ಣಗೆ ಬಂಧನದ ಭೀತಿ ಕಾಡಲಿದೆ. ಸದ್ಯಕ್ಕೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಲು ಹೆಚ್.ಡಿ.ರೇವಣ್ಣ ಈಗಾಗಲೇ ವಕೀಲರೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಒಂದು ವೇಳೆ ಅತ್ಯಾಚಾರ ಪ್ರಕರಣ ದಾಖಲಾದರೆ ನಿರೀಕ್ಷಣಾ ಜಾಮೀನಿಗಾಗಿ ಕಾನೂನು ಹೋರಾಟ ನಡೆಸಲೂ ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ. ಹೀಗಾಗಿ ಎಸ್ಐಟಿ ತನಿಖೆ, ಸಂತ್ರಸ್ತರು ನೀಡುವ ಹೇಳಿಕೆ, ವಿಧಿವಿಜ್ಞಾನ ಪ್ರಯೋಗಾಲಯ ನೀಡುವ ವರದಿ ಇವು ಪ್ರಜ್ವಲ್ ರೇವಣ್ಣ ಬಂಧನದ ಭವಿಷ್ಯ ನಿರ್ಧರಿಸಲಿದೆ.
ಹಾಗಾದ್ರೆ ಪ್ರಜ್ವಲ್ ರೇವಣ್ಣ ಈ ಪ್ರಕರಣದಿಂದ ಪಾರಾಗ್ತಾರಾ.? ಇಲ್ಲ, ತಗ್ಲಾಕ್ಕೊಂತಾರಾ.?