ದಾವಣಗೆರೆ : ರಾತ್ರೋ ರಾತ್ರಿ 10 ಸಾವಿರ ಕೂಪನ್ ಹಂಚಿಕೆ ಮಾಡಿದ್ಯಾರು..? ಎಲೆಕ್ಷನ್ ಹೊತ್ತಲ್ಲಿ ಮಂಡ್ಯ ರಣಕಣದಲ್ಲಿ ಇದೆಂಥಾ ಡೆವಲಪ್ಮೆಂಟ್.? ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಸುಮಲತಾ ಕೊಟ್ಟಿದ್ದು ಎಂಥಾ ಶಾಕ್.? ಕುಮಾರಣ್ಣನ ವಿರುದ್ಧ DK ರೊಚ್ಚಿಗೆದ್ದಿದ್ದೇಕೆ.?
2019ರಂತೆ ಮಂಡ್ಯ ರಣಕಣ ರಂಗೇರ್ಲಿಲ್ಲ. ಅಖಾಡದಲ್ಲಿ ನಿಂತು ಪ್ರತಿಸ್ಪರ್ಧಿಗಳು ಮಾತಿನ ಮಲ್ಲಯುದ್ಧವನ್ನ ನಡೆಸಲಿಲ್ಲ. ತೊಡೆ ತಟ್ಟಿ ಸವಾಲುಗಳನ್ನೂ ಎಸೆಯಲಿಲ್ಲ. ಆದ್ರೆ ಚುನಾವಣೆ ನಡೆದ ಶುಕ್ರವಾರ ಕುಮಾರಸ್ವಾಮಿ ಡಿಕೆ ಸಹೋದರರ ವಿರುದ್ಧ ಒಂದು ಬಿಗ್ ಬಾಂಬ್ಅನ್ನ ಹಾಕಿದ್ದಾರೆ.. ಆ ಬಾಂಬ್ಗೆ ಡಿಕೆಶಿ ಕೊಟ್ಟ ಡಿಚ್ಚಿ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮತ್ತೊಂದು ಕಡೆ ಮಂಡ್ಯ ಸಂಸದೆ ಸುಮಲತಾರ ಆ ಒಂದು ಮಾತು, ಕುಮಾರಸ್ವಾಮಿ ಮತ್ತು ದಳಪತಿಗಳನ್ನ ಕೆರಳಿಸಿದೆ. ಹಾಗಾದ್ರೆ ಏನದು ಮಂಡ್ಯ ಸಂಸದೆ ಸುಮಲತಾ ಅವರ ಆ 1 ಮಾತು ಅಂದ್ರಾ.? ಅದನ್ನ ತೋರಿಸ್ತೀವಿ. ಆದ್ರೆ ಅದಕ್ಕಿಂಥ ಮೊದ್ಲು ಕುಮಾರಸ್ವಾಮಿ ಡಿಕೆ ಸಹೋದರರ ವಿರುದ್ಧ ಸಿಡಿಸಿರೋ ಆ ಬಾಂಬ್ ಏನು ಅನ್ನೋದನ್ನ ಈ ಸುದ್ದಿಯಲ್ಲಿ ನೋಡಿ
ತಮ್ಮನ್ನು ರಣಹೇಡಿ ಎಂದ DCM ಡಿ.ಕೆ.ಶಿವಕುಮಾರ್ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರೋ ಮಾಜಿ CM ಹೆಚ್.ಡಿ.ಕುಮಾರಸ್ವಾಮಿ ಅವರು, ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ಗೆ ತಿರುಗೇಟನ್ನ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ. ಈ ಇಬ್ಬರು ಮಹಾನುಭಾವರು.. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ ಅಂತೇಳಿ ಡಿಕೆಶಿ ಸಹೋದರರ ವಿರುದ್ಧ ಹರಿಹಾಯ್ದಿದ್ದಾರೆ.
‘ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ’?
‘ಅವರು ಸತ್ಯಹರಿಶ್ಚಂದ್ರರೇ’ – DCM ಡಿಕೆ ಡಿಚ್ಚಿ!?
10 ಸಾವಿರ ರೂ. ಮೌಲ್ಯದ ಗಿಫ್ಟ್ ಕಾರ್ಡ್ಅನ್ನು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಕಡೆಯವರು ಮತದಾರರಿಗೆ ನೀಡಿದ್ದಾರೆ ಅಂತೇಳಿ ಮಾಜಿ CM HD ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ ಹೇಳಿ.? ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯವರು ಏನನ್ನು ಹಂಚುತ್ತಿದ್ದಾರೆ ಎಂದು ತೋರಿಸಲೆ.? ಅವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ನಾನೇನು ಎನ್ನುವುದು ಜನಕ್ಕೆ ಗೊತ್ತಿದೆ. ನಾನು ಖಂಡಿತವಾಗಿಯೂ ಸತ್ಯ ಹರಿಶ್ಚಂದ್ರ ಎಂದು ಕಿಡಿಕಾರಿದ್ದಾರೆ.
ಮುನಿರತ್ನ, ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಹಂಚುತ್ತಿದ್ದಾರೆ. ನಾವು ಹಂಚುತ್ತಿರುವುದು ನಮ್ಮ ಪ್ರಣಾಳಿಕೆ ಕಾರ್ಡ್ ಅಂತೇಳಿ ಡಿಕೆಶಿ ಸ್ಪಷ್ಟಣೆ ಕೊಟ್ಟಿದ್ದಾರೆ. ಅಷ್ಠೇ ಅಲ್ಲ, ಇಷ್ಟಾದರೂ ಭಯ ಬಂದಿದೆಯಲ್ಲ. ಹೆದರಿಕೊಂಡು ರಣ ಹೇಡಿತರ ಬೇರೆ ಕಡೆ ಹೋಗಿದ್ದಾರೆ. ಅವರೇ ಚುನಾವಣೆಗೆ ನಿಂತುಕೊಳ್ಳಬೇಕಿತ್ತು.
ಅಮಾಯಕರನ್ನು ನಿಲ್ಲಿಸಿ ಮಂಡ್ಯಕ್ಕೆ ಓಡಿ ಹೋಗಿದ್ದಾರೆ. ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ,.? ಏನೇನು ಹಂಚುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವೇ? ಮುನಿರತ್ನನ ಮೂಲಕ ಗೋಲ್ಡ್ ಕಾರ್ಡ್ ಮಾಡಿ ಹಂಚುತ್ತಿದ್ದಾರೆ. ಸಿನಿಮಾ ಸ್ಟೈಲ್ ಅಲ್ಲಿ ಮಾಡಿದ್ದಾರೆ. ಅವರೇಕೆ ಇಷ್ಟೊಂದು ಹತಾಶರಾಗಿದ್ದಾರೆ. ಹರಿಶ್ಚಂದ್ರನ ಮೊಮ್ಮಗ ಏನು ಹಂಚಿದ್ದಾನೆ.? ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿ, ಹೆಣ್ಣು ಮಕ್ಕಳನ್ನು ಅಗೌರವದಿಂದ ಕಂಡಿದ್ದಾರೆ. ಮಾಧ್ಯಮಗಳಲ್ಲಿ ಅವರ ಕರ್ಮಕಾಂಡ ತೋರಿಸುತ್ತಿದ್ದರು. ಇದರ ವಿರುದ್ಧ ಹೊಸ ಕಾನೂನು ಮಾಡಬೇಕು ಎಂದು ಯಾರೋ ಹೇಳುತ್ತಿರುವುದನ್ನು ನಾನು ಕೇಳಿದೆ ಅಂತೇಳಿ ಡಿಕೆಶಿ ಕುಟುಕಿದ್ದಾರೆ.
HDK – ಸುಮಾ ಮಧ್ಯೆ ಕೋಲ್ಡ್ ವಾರ್!?
HDK ಪರ ಸುಮಾ ಯಾಕೆ ಪ್ರಚಾರ ಮಾಡ್ಲಿಲ್ಲ?
ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರು ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸಪೋರ್ಟ್ ಮಾಡಿಲ್ಲ ಅಂತೇಳಿದ್ರು. ಇದಕ್ಕೆ ಇವತ್ತು ರಿಯಾಕ್ಟ್ ಮಾಡಿರೋ ಹೆಚ್ಡಿಕೆ, ದೇವೇಗೌಡರು ಆ ರೀತಿ ಯಾಕೆ ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಸುಮಲತಾ ಅವರ ಪ್ರಶ್ನೆ ಇಲ್ಲಿ ಬರಲ್ಲ, ದೇವೇಗೌಡರು ಯಾಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ದೇವೇಗೌಡರಿಗೆ ಮಾಹಿತಿ ಕೊರತೆ ಆಗಿರಬೇಕು ಅನಿಸುತ್ತದೆ. ಪಕ್ಷ ಭೇದ ಮರೆತು ಕಾಂಗ್ರೆಸ್, ಬಿಜೆಪಿಯವ್ರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಯಾರು ವಿರೋಧ ಮಾಡಿಲ್ಲ. ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ ಅಂತೇಳಿದ್ದಾರೆ. ಕುಮಾರಸ್ವಾಮಿ ಪರ ಪ್ರಚಾರಕ್ಕೆ ಯಾರು ನನ್ನ ಕರೆಯಲಿಲ್ಲ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅವರ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇನೆ. ಇದಕ್ಕಿಂತ ಇನ್ನೇನು ಮಾಡಬೇಕು ನಾನು ಅಂತೇಳೀ ಹೆಚ್ಡಿಕೆ ಮರು ಪ್ರಶ್ನೆ ಹಾಕಿದ್ದಾರೆ.
‘ಜೆಡಿಎಸ್ ವರ್ತನೆ ಬೇಸರ ತಂದಿದೆ’‘ತಪ್ಪು ಮಾಡಿಬಿಟ್ನಾ ಎನಿಸುತ್ತಿದೆ’ – ಸುಮಲತಾ?
ಹೀಗಂಥ ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡದೇ ಇರೋದಕ್ಕೂ ಕಾರಣಗಳಿವೆ. ಅವರ ಹಾಗೂ ಪಕ್ಷದ ವರ್ತನೆ ಬೇಸರ ತಂದಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಜಿಡಿಎಸ್ ನಾಯಕರು ತನ್ನನ್ನು ದೂರವಿಟ್ಟರು. ಅವರು ನಡೆಸಿದ ಸಭೆಗೆ ನನ್ನನ್ನು ಕರೆಯಲಿಲ್ಲ, ನಾನಿಲ್ಲದೆಯೂ ಚುನಾವಣೆ ಗೆಲ್ಲುತ್ತೇವೆ ಎನ್ನುವ ಮಾತುಗಳು ನನ್ನ ಕಿವಿಗೆ ಬಿದ್ದಿದೆ. ಅವರ ವರ್ತನೆ ಮತ್ತು ಧೋರಣೆಗಳಿಂದ ತುಂಬಾ ಬೇಸರವಾಗಿದೆ ಅಂತೇಳಿದ್ದಾರೆ. ಅಷ್ಟೇ ಅಲ್ಲ, ನಾನು ಸ್ಪರ್ಧೆ ಮಾಡೋದಿಲ್ಲ ಎಂದಾಗ ನನ್ನ ಬೆಂಬಲಿಗರಿಗೆ ಬೇಸರವಾಗಿತ್ತು, ಜೆಡಿಎಸ್ ವರ್ತನೆ ಕಂಡು ಅವರು ಸ್ಪರ್ಧಿಸಿ ಎಂದು ನೂರು ಬಾರಿ ಹೇಳಿದ್ದರು. ಆದರೆ ಯಾವಾಗಲೂ ಬಿಗ್ಗರ್ ಪಿಕ್ಚರ್ ಬಗ್ಗೆ ಗಮನ ಇರಬೇಕು, ಪ್ರಧಾನಿ ಮೋದಿ ಗೆಲುವು ಸಾಧಿಸಬೇಕು ಎಂದು ಹೇಳುತ್ತಿದ್ದೆ. ಈಗಲೂ ಜನರ ಮಾತು ಕೇಳದೆ ತಪ್ಪು ಮಾಡಿದೆನಾ ಎನಿಸುತ್ತದೆ. ನಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ, ಕುಮಾರಸ್ವಾಮಿಯವರು ಮನೆಗೆ ಬಂದು ಹೋದ ಮೇಲೆ ಒಂದೇ ಒಂದು ಸಲ ತನಗೆ ಫೋನ್ ಮಾಡಿಲ್ಲ ಎಂದು ಸುಮಲತಾ ಬೇಸರದಿಂದ ಹೇಳಿದ್ದಾರೆ..
ಅದೇನೇ ಇರ್ಲಿ, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಒಟ್ಟು 14 ಕ್ಷೇತ್ರಗಳಿಗೆ ಮತದಾನವಾಗಿದೆ. ಇದ್ರಲ್ಲಿ ಮಂಡ್ಯ ಕ್ಷೇತ್ರವೂ ಇದೆ.. ಇಲ್ಲಿ ಯಾರು ಗೆಲ್ಲಬೇಕು ಅನ್ನೋ ಭವಿಷ್ಯವನ್ನ ಮತದಾರರು ಬರೆದಾಗಿದೆ. ಫಲಿತಾಂಶಕ್ಕಾಗಿ ಜೂನ್ 4ರವರೆಗೂ ಕಾಯಲೇಬೇಕು. ಹಾಗಾದ್ರೆ ನಿಮ್ಮ ಪ್ರಕಾರ ಮಂಡ್ಯದಲ್ಲಿ ಗೆಲ್ಲೋದ್ಯಾರು.? ಕುಮಾರಸ್ವಾಮಿಯವರ ಆರೋಪಗಳು ಮತ್ತು ನಡೆಯ ಬಗ್ಗೆ ನೀವೇನಂತಿರಾ?