ದಾವಣಗೆರೆ: ಹೆರಿಗೆ ವೇಳೆ ಮಗುವಿನ ಗುದದ್ವಾರಕ್ಕೆ ಕತ್ತರಿ ಬಿದ್ದ ಕಾರಣ ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಬಾಣಂತಿ ಕುಟುಂಬಸ್ಥರು ದಾವಣಗೆರೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ರು.
ದಾವಣಗೆರೆ ಕೊಂಡಜ್ಜಿ ರಸ್ತೆ ಅರ್ಜುನ್ ಪತ್ನಿ ಅಮೃತಾ ಜೂ.೨೭ರಂದು ಹೆರಿಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿ ಅಮೃತಾಗೆ ಬಿಪಿ ಜಾಸ್ತಿಯಾಗಿ ಸೀಸೆರಿಯನ್ ಮಾಡಿ ಮಗು ತೆಗೆಯಬೇಕೆಂದು ವೈದ್ಯರು ಹೇಳಿದ್ದಾರೆ. ಅದರಂತೆ ಸಿಸೇರಿಯನ್ ಗೆ ಕುಟುಂಬಸ್ಥರು ಒಪ್ಪಿದ್ದಾರೆ. ಅಂತೆಯೇ ಸಿಸೇರಿಯನ್ ಮಾಡಿ ಮಗು ಹೊರತೆಗೆಯುವ ವೇಳೆ ತಾಯಿಯ ಹೊಟ್ಟೆಯೊಳಗಿದ್ದ ಮಗುವಿನ ರೆಕ್ಟಮ್(ಗುದದ್ವಾರಕ್ಕೆ)ಗೆ ವೈದ್ಯ ನಿಜಾಮುದ್ದೀನ್ ಕತ್ತರಿ ಹಾಕಿದ್ದಾರೆ. ಇದರಿಂದಾಗಿ ಶಿಶುವಿನ ರೆಕ್ಟಮ್ ಭಾಗಕ್ಕೆ ಹಾನಿಯಾಗಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಕೂಡಲೇ ಮಗುವನ್ನು ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಎರಡು ದಿನಗಳ ಕಾಲ ಸತತ ಚಿಕಿತ್ಸೆ ನಡೆಸಿ ಮಗುವನ್ನ ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಯಿತಾದರೂ ಇಂದು ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.
ಪ್ರತಿಭಟನೆ
ವೈದ್ಯನ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೊಷಕರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಈ ಪ್ರಕರಣ ಸಂಬಂಧ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕರಿಂದ ಡಿಸಿಗೆ ವರದಿ ನೀಡಲಾಗಿದೆ.