
ಶಿವಮೊಗ್ಗ: ಯೋಗ ಅಭ್ಯಾಸದಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ. ನಮಗೆ ಸದಾ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವ ಜತೆಯಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹೇಳಿದರು.
ನಗರದ ಬೊಮ್ಮನಕಟ್ಟೆಯ ಮಮತಾ ನಗರದಲ್ಲಿ ಆಯೋಜಿಸಿದ್ದ 20 ದಿನಗಳ ಉಚಿತ ಯೋಗ ಶಿಬಿರದ ಸಮಾರೋಪ ಹಾಗೂ 32ನೇ ಶಾಖೆ ಪ್ರಾರಂಭೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಕರಾತ್ಮಕ ಭಾವನೆಗಳನ್ನು ದೂರ ಮಾಡುವುದರ ಜತೆಯಲ್ಲಿ ಮನುಷ್ಯನ ಮನಸ್ಸನ್ನು ತಿಳಿಗೊಳಿಸುತ್ತದೆ. ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ. ದ್ವೇಷ ಅಸೂಹೆಗಳನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಔಷಧಿಗಳಿಂದ ಗುಣಪಡಿಸಲು ಸಾಧ್ಯವಾಗದ ಕೆಲ ಕಾಯಿಲೆಗಳನ್ನು ಯೋಗದಿಂದ ಗುಣಪಡಿಸಲು ಸಾಧ್ಯವಿದೆ ಎಂದು ಹೇಳಿದರು.

ಪ್ರತಿ ನಿತ್ಯ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಭಜನೆ ಮಾಡಿದರೆ ಸದಾ ಹಸನ್ಮುಖಿಯಾಗಿರಲು ಸಾಧ್ಯ. ಲವಲವಿಕೆಯಿಂದ ಇರುವ ಜತೆಯಲ್ಲಿ ಆಯುಷ್ಯ ಹೆಚ್ಚಾಗಲು ಸಾಧ್ಯವಾಗುತ್ತದೆ. ಈಗಾಗಲೇ ಶಿವಗಂಗಾ ಯೋಗಕೇಂದ್ರದ ವತಿಯಿಂದ ನಗರದಲ್ಲಿ 32 ಕೇಂದ್ರಗಳಲ್ಲಿ ಉಚಿತವಾಗಿ ಯೋಗ ಕಲಿಸುತ್ತಿದೆ. ಉತ್ತಮ ಆರೋಗ್ಯ ಶೈಲಿ, ಜೀವನಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಯೋಗ ಶಿಕ್ಷಕರಾದ ವಿಜಯಾ ಬಾಯರ್ ಅವರು ಮಾತನಾಡಿ, ಯೋಗ ನಮ್ಮ ಬಾಹ್ಯ ಹಾಗೂ ಆಂತರಿಕ ಸೌಂದರ್ಯ ಹೆಚ್ಚಿಸುವುದರ ಜತೆಗೆ ಕಾಯಿಲೆಗಳಿಂದ ದೂರ ಇರುವಂತೆ ಮಾಡುತ್ತದೆ. ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಹೇಳಿದರು. ಸಹಶಿಕ್ಷಕ ಅಶೋಕ್, ಉಮೇಶ್, ಆಶಾ, ಪುಟ್ಟಸ್ವಾಮಿ, ಶಿವಕುಮಾರ್, ವಿನುತಾ, ತ್ರಿವೇಣಿ, ರೇಣುಕಮ್ಮ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.