ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬೆನ್ನೆಲ್ಲೆ ರಾಜ್ಯದ ಜನರಿಗೆ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟದ ತೆರಿಗೆ ದರ ಏರಿಕೆ ಮಾಡಿದೆ. ಈಗಾಗಲೇ ಆಸ್ತಿ ತೆರಿಗೆ, ಪಹಣಿ ಸೇರಿದಂತೆ ಇನ್ನಿತರ ದರ ಹೆಚ್ಚು ಮಾಡಿರುವ ಸರಕಾರ ಈಗ ರಾಜ್ಯದ ಜನರಿಗೆ ಪೆಟ್ರೋಲ್, ಡೀಸೆಲ್ ದರ ತೆರಿಗೆ ಏರಿಕೆ ಮಾಡಿದೆ.
ಒಂದು ಕಡೆ ಗ್ಯಾರಂಟಿಗಳನ್ನು ಕೊಟ್ಟು ಸಹಾಯ ಮಾಡುತ್ತಿರುವ ಸರಕಾರ ಅದನ್ನು ತೂಗಿಸಲು ದರದ ಬರ ಏರಿಕೆ ಮಾಡಿದೆ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ಶನಿವಾರದಿಂದಲೇ ಅನ್ವಯವಾಗುವಂತೆ ರಾಜ್ಯಾದ್ಯಂತ ಪ್ರತಿ ಲೀಟರ್ ಪ್ರೆಟೋಲ್ ದರವನ್ನು 3 ರೂ. ಹಾಗೂ ಡೀಸೆಲ್ ದರನ್ನು 3 ರೂ. 50 ಪೈಸೆಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದರಿಂದ ಇನ್ನು ಮುಂದೆ ಪೆಟ್ರೋಲ್ ದರ ಲೀಟರ್ಗೆ 103 ರೂ.ಗೆ ಹಾಗೂ ಡೀಸೆಲ್ 91 ರೂ. 50 ಪೈಸೆ ಏರಿಕೆಯಾಗಿದೆ. ಈ ಹಿಂದೆಯೇ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟ ತೆರಿಗೆ ದರವನ್ನು ಏರಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಡೆಹಿಡಿಯಲಾಗಿತ್ತು.
ಒಂದು ವೇಳೆ ದರ ಹೆಚ್ಚಳ ಮಾಡಿದರೆ, ವಿರೋಧ ಪಕ್ಷಗಳು ಇದನ್ನೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿತ್ತು ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿತ್ತು. ಅಲ್ಲದೇ ವಿರೋಧ ಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡರೆ ಫಲಿತಾಂಶದಲ್ಲಿ ಹಿನ್ನಡೆಯಾಗಬಹುದೆಂಬ ಕಾರಣಕ್ಕೆ ಸರ್ಕಾರ ದರ ಹೆಚ್ಚಿಸುವ ದುಸ್ಸಾಹಸಕ್ಕೆ ಮುಂದಾಗಿರಲಿಲ್ಲ. ಒಟ್ಟಾರೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಅಗತ್ಯ ಇರುವ ಕಾರಣ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.