ದಾವಣಗೆರೆ: ಸ್ಥಳೀಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಉಳಿಸುವಂತೆ ಹೋರಾಟ ನಡೆಸುತ್ತಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ಇಂದು ದಾವಣಗೆರೆ ಬಂದ್ಗೆ ಕರೆ ನೀಡಿದೆ. .
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪೇಮೆಂಟ್ ಕೋಟಾದಡಿ ಸೀಟು ಹಂಚಿಕೆ ವ್ಯವಸ್ಥೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಎಐಡಿಎಸ್ಒ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಚಳವಳಿಯನ್ನು ತೀವ್ರಗೊಳಿಸಲು ಬುಧವಾರ ಬಂದ್ಗೆ ಕರೆ ನೀಡಲಾಗಿದ್ದು, ಈಗಾಗಲೇ ರೈತ ಸಂಘ, ದಸಂಸ, ಕಾರ್ಮಿಕ ಸೇರಿ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಈಗಾಗಲೇ ಯುಬಿಡಿಟಿ ಕಾಲೇಜಿನಿಂದ ಆರಂಭವಾದ ಬೈಕ್ ರ್ಯಾಲಿ ನಗರದ ಹಲವು ರಸ್ತೆಗಳಲ್ಲಿ ಸಾಗಿ ಜಯದೇವ ವೃತ್ತದಲ್ಲಿ ಕೊನೆಗೊಂಡಿದೆ. ಅಲ್ಲದೇ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ‘ಎಂಜಿನಿಯರಿಂಗ್ ಸೀಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವುದನ್ನು ನಿಲ್ಲಿಸಿ’, ‘ಕಾಲೇಜು ಉಳಿಸಲು ಸ್ವಯಂಪ್ರೇರಿತ ಬಂದ್ಗೆ ಸಹಕರಿಸಿ’ ಎಂಬ ಭಿತ್ತಿಪತ್ರಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಗಿದೆ.
ಪೇಮೆಂಟ್ ಕೋಟಾ ರದ್ದುಪಡಿಸಬೇಕು ಹಾಗೂ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವ ಯುಬಿಡಿಟಿ ಕಾಲೇಜಿಗೆ ಅನುದಾನ ನೀಡಬೇಕು ಎಂಬ ಆಗ್ರಹ ವಿದ್ಯಾರ್ಥಿ ಸಂಘಟನೆಯದ್ದು. ರ್ಯಾಲಿಯ ಸ್ಥಳಕ್ಕೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮುಖ್ಯಮಂತ್ರಿಗೆ ತಲುಪಿಸಬೇಕಿರುವ ಮನವಿ ಪತ್ರ ಸ್ವೀಕರಿಸಿದ್ದಾರೆ.
ಕಾಲೇಜು ಉಳಿಸಲು ಕೋರಿಕೆ
ಯುಬಿಡಿಟಿ ಕಾಲೇಜಿನ ಪೇಮೆಂಟ್ ಸೀಟ್ ನಿರ್ಧಾರ ವಿರೋಧಿಸಿ ಕರೆ ನೀಡಿರುವ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ.ವಿನಯ್ಕುಮಾರ್ ತಿಳಿಸಿದ್ದಾರೆ.‘ಆರ್ಥಿಕವಾಗಿ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಪಾಲಿಗೆ ಯುಬಿಡಿಟಿ ಕಾಲೇಜು ವರದಾನವಾಗಿದೆ. ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಬದುಕು ರೂಪಿಸಿಕೊಂಡಿದ್ದಾರೆ. ಇಂತಹ ಕಾಲೇಜು ಉಳಿಸಬೇಕಾದ ಅನಿವಾರ್ಯತೆ ಇದ್ದು, ಎಲ್ಲರೂ ಸಹಕರಿಸಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಒತ್ತಾಯಿಸುವಂತಿಲ್ಲ: ಎಸ್ಪಿ ಸ್ಪಷ್ಟನೆ
ಬಂದ್ ಸ್ವಯಂಪ್ರೇರಿತವಾಗಿ ನಡೆಸಬೇಕೆ ಹೊರತು ಒತ್ತಾಯ ಮಾಡುವಂತಿಲ್ಲ. ಶಾಲೆ–ಕಾಲೇಜು, ಅಂಗಡಿಗಳ ಬಾಗಿಲು ಮುಚ್ಚಿಸಲು ಒತ್ತಾಯಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.‘ಸಾಮಾನ್ಯ ಜನರ ಜೀವನ, ವಾಹನ ಹಾಗೂ ಆಸ್ತಿಗೆ ಹಾನಿ ಮಾಡುವಂತಿಲ್ಲ. ರಸ್ತೆ ತಡೆ, ವಾಹನ ಅಡ್ಡಗಟ್ಟಿ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ. ತುರ್ತು ಮತ್ತು ಅಗತ್ಯ ಸೇವೆಗೆ ತೊಂದರೆ ಮಾಡುವಂತಿಲ್ಲ. ಪ್ರತಿಕೃತಿ ದಹನ, ಟೈರ್ಗಳನ್ನು ಸುಡುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಬಂದ್ಗೆ ಅನುಮತಿ ನೀಡಿಲ್ಲ: ಡಿಸಿ
ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಬಂದ್ ಮಾಡುವಂತಿಲ್ಲ, ನಾವು ಬಂದ್ ಮಾಡಲು ಯಾರಿಗೂ ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿ ಕಾರಿ ಡಾ. ಗಂಗಾಧರಸ್ವಾಮಿ ತಿಳಿಸಿದ್ದಾರೆ.