ದಾವಣಗೆರೆ: ರಾಜ್ಯದಲ್ಲಿನ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ರಾಜ್ಯದ ಎಲ್ಲಾ ತಾಲೂಕಿನಲ್ಲಿ ಮಡಿಕಟ್ಟೆಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ನೇತೃತ್ವದಲ್ಲಿ ಮಡಿವಾಳ ಸಮುದಾಯದವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು. ನಂತರ ಸಮುದಾಯವು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಘೋಷಣೆ ಮಾಡಿತು.

ಮನವಿ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾ ಮಲ್ಲಿಕಾರ್ಜುನ, ನಿಮ್ಮ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಾಧ್ಯವಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು. ಉಳಿದಂತೆ ಸ್ವಸಹಾಯ ಗುಂಪುಗಳಿಗೆ ಸಹಾಯಧನ, ಎಲ್ಲಾ ತಾಲೂಕುಗಳಲ್ಲಿ ಮಡಿಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಇದಲ್ಲದೇ ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಅರ್ಭಥಿಯಾಗಿ ನಾನು ಸ್ಪರ್ಥಿಸಿದ್ದು, ಕೇವಲ ಬಹುಮತ ನೀಡುವ ಬದಲು ಒನ್ ವೇ ಮತದಾನ ಆಗುವ ನಿಟ್ಟಿನಲ್ಲಿ ಮಡಿವಾಳ ಸಮುದಾಯವು ಒಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿ ಪ್ರಚಂಡ ಬಹುಮತದಿಂದ ಆರಿಸಿ ಸಂಸತ್ತಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.

ಮನವಿ ಸಲ್ಲಿಸಿ ಮಾತನಾಡಿದ ಮಡಿವಾಳ ಸಮಾಜದ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ಮಾತನಾಡಿ, ಕಾಂಗ್ರೆಸ್ ಆಡಳಿತ ಇದ್ದಾಗ ಈ ಹಿಂದೆ ದೇವರಾಜ ಅರಸ್ ಬಡಾವಣೆಯಲ್ಲಿ ಸಮುದಾಯದ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯಕ್ಕೆ ನಿವೇಶನವನ್ನು ನೀಡಿದರು. ಇದಲ್ಲದೇ 2013ರಲ್ಲಿ ಪುನ ಅಧಿಕಾರಕ್ಕೆ ಬಂದಾಗ 50 ಲಕ್ಷ ರೂಪಾಯಿ ಅನುದಾನವನ್ನು ವಿದ್ಯಾರ್ಥಿಗಳ ನಿಲಯಕ್ಕೆ ನೀಡಿ ಸಮುದಾಯದ ಏಳಿಗೆಗೆ ಮುಂದಾಗಿತ್ತು ಎಂದು ಮಾಹಿತಿ ನೀಡಿದರು.

ಇಷ್ಟೇ ಅಲ್ಲದೇ 2018ರಲ್ಲಿ ಪುನ: ನಗರದ ಪ್ರತಿಷ್ಠಿತ ಬಡಾವಣೆಯಾದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಮತ್ತೊಂದು ಖಾಲಿ ನಿವೇಶನವನ್ನು ಪುರುಷರ ವಸತಿ ನಿಲಯಕ್ಕೆ ಮಂಜೂರು ಮಾಡಿದರು. ಮಾತ್ರವಲ್ಲದೆ ಇದೀಗ 2024ರಲ್ಲಿ ವಿದ್ಯಾರ್ಥಿಗಳ ನಿಲಯವನ್ನು ಪೂರ್ಣ ಗೊಳಿಸಲು 1 ಕೋಟಿ ರೂಪಾಯಿ ಅನುದಾನ ನೀಡಿರುತ್ತಾರೆ ಎಂದು ತಿಳಿಸಿದರು.

ದಾವಣಗೆರೆಯ ಮಡಿಕಟ್ಟೆ (ದೋಭಿಘಾಟಿನಲ್ಲಿ) ಬಟ್ಟೆ ತೊಳೆಯುವ ಮಿಷನ್ನಿಗಾಗಿ 1 ಕೋಟಿ 35 ಲಕ್ಷ ನೀಡುವ ಮೂಲಕ ಮಡಿವಾಳ ಸಮಾಜದ ಅಭಿವೃದ್ದಿಗೆ ಮುಂದಾಗಿದೆ. ಇದಕ್ಕೂ ಮೊದಲು ದೋಭಿಘಾಟ್ ನಿರ್ಮಾಣದ ನಂತರ ಸುಮಾರು ಒಂದೂವರೆ ಕೋಟಿ ರೂಪಾಯಿಗಳಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡಲಾಗಿತ್ತು. ಇದೇ ವೇಳೆ ಬಟ್ಟೆ ತೊಳೆಯುವ ಯಂತ್ರ ಅಳವಡಿಸಲು ಸುಸಜ್ಜಿತ ಮತ್ತು ಬೃಹತ್ ಕಟ್ಟಡ ನಿರ್ಮಾಣ ಮಾಡಿ, ಯಂತ್ರ ಅಳವಡಿಸಲು ಸಜ್ಜಾಗಿದೆ ಎಂದರು.

ಇದರೊಂದಿಗೆ ಮಡಿವಾಳ ಸಮುದಾಯದ ಪ್ರಮುಖ ಬೇಡಿಕೆಯಾದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ದೋಭಿಘಾಟ್ ನಿರ್ಮಾಣ ಮಾಡಲು ನಿವೇಶನ ಗುರುತಿಸುವ ಜತೆ ಬಟ್ಟೆ ತೊಳೆಯುವ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿಕೊಡಲು ಹಾಗೂ ತಾಲೂಕು ಮಟ್ಟದಲ್ಲಿ ನಮ್ಮ ಜನಾಂಗದಲ್ಲಿ ಸೂರುಗಳು ಇಲ್ಲದೇ ಇರುವ ನಿರಾಶ್ರಿತರನ್ನು ಗುರುತಿಸಿ ನಿವೇಶನ ಮಂಜೂರು ಮಾಡಿ, ಸರ್ಕಾರದ ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ, ಆಂತಹ ಬಡಾವಣೆಗಳಿಗೆ ಶ್ರೀ ಬಸವ ಮಾಚಿದೇವ ಬಡಾವಣೆಯೆಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಧನಂಜಯ, ಸುರೇಶ್ ಕೋಗುಂಡೆ, ವಿಜಯ ಕುಮಾರ್, ಜಗಳೂರು ರಮೇಶ್, ಕಂಚಿಕೆರೆ ಕೆಂಚಪ್ಪ, ಹೊನ್ನಾಳಿ ಮಹಾಂತೇಶ್, ತೌಡೂರು ಭೀಮಣ್ಣ, ಅಂಜಿನಪ್ಪ ಪೂಜಾರ್, ಶಕುಂತಲಮ್ಮ, ನಾಗಮ್ಮ, ರುದ್ರೇಶ್, ದುಗ್ಗಪ್ಪ, ಅಣ್ಣಪ್ಪ ಇತರರು ಇದ್ದರು.

Share.
Leave A Reply

Exit mobile version