ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಕಾಲೇಜಿನ ಡೀನ್ ಡಾ. ತಿಪ್ಪೇಶ್ ಅಭಿಪ್ರಾಯಪಟ್ಟರು.
ಕೃಷಿ ಕಾಲೇಜಿನ ಆವರಣದಲ್ಲಿ ವಲಯ 11ರ ರೋಟರಿ ಕ್ರೀಡೋತ್ಸವ 2024 ಉದ್ಘಾಟಿಸಿ ಮಾತನಾಡಿ, ನಾವು ಒತ್ತಡದ ಜೀವನಶೈಲಿಯಲ್ಲಿ ಸಾಗುತ್ತಿದ್ದು, ಒತ್ತಡಮುಕ್ತ ಜೀವನಶೈಲಿಯಾಗಿ ರೂಪುಗೊಳ್ಳಲು ಕ್ರೀಡೆ, ಸಾಂಸ್ಕೃತಿಕ, ಮನೋರಂಜನೆಯು ಜೀವನದ ಅವಿಭಾಜ್ಯ ಅಂಗಗಳಾಗಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳ ಜತೆ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿರುವುದು, ಸದಸ್ಯರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿರುವುದು ಮುಖ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಮಾತನಾಡಿ, ರೋಟರಿ ಸದಸ್ಯರಲ್ಲಿ ಅಗಾಧವಾದ ಪ್ರತಿಭೆ ಇದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಇದ್ದಾರೆ. ಕ್ರೀಡೆ ಅಭ್ಯಾಸ ನಮ್ಮಲ್ಲಿ ಖಿನ್ನತೆ ಕಡಿಮೆ ಮಾಡುವುದರ ಜತೆಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳಿಸುತ್ತದೆ. ಇದರಿಂದ ಪರಸ್ಪರರಲ್ಲಿ ಓಡನಾಟ, ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ. ವಲಯ ಮಟ್ಟದ ಕ್ರೀಡೆಯಲ್ಲಿ ವಿಜೇತರಾದವರು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದರು.
ಕ್ರೀಡೋತ್ಸವ ಅಧ್ಯಕ್ಷತೆಯನ್ನು ಶಿವಮೊಗ್ಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಜಿ.ಕಿರಣ್ ಮಾತನಾಡಿ, ಇಂದು ಕ್ರೀಡಾಕೂಟದಲ್ಲಿ ರೋಟರಿ ಸೆಂಟ್ರಲ್, ಶಿವಮೊಗ್ಗ ಪೂರ್ವ, ತೀರ್ಥಹಳ್ಳಿ, ಕೋಣಂದೂರು, ರಿಪ್ಪನ್ಪೇಟೆ, ಸಾಗರ, ಸೊರಬ ಸದಸ್ಯರು ಭಾಗವಹಿಸಿ ಕ್ರೀಡಾ ಪ್ರದರ್ಶನ ನೀಡುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಕ್ರೀಡಾವಲಯ ಸಂಯೋಜಕ ಸಂತೋಷ್.ಬಿ.ಎ., ವಲಯ ಸೇನಾನಿ ಮಂಜುನಾಥ ಕದಂ, ಟಿ.ಆರ್.ಸಂತೋಷ್, ನಿರಂಜನ್ ಹೆಗಡೆ, ಅನಿಲ್ಕುಮಾರ್, ಗಿರೀಶ್, ಈಶ್ವರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಡಾ. ಗುಡದಪ್ಪ ಕಸಬಿ, ರವಿ ಕೋಟೋಜಿ ಮತ್ತಿತರರು ಉಪಸ್ಥಿತರಿದ್ದರು.