ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿಂಬಾಗದಲ್ಲಿ ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ಇವರ ವತಿಯಿಂದ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ತಾಲೂಕಿನಲ್ಲಿ ವಿವಿಧ ಸಂಘ, ಸಂಸ್ಥೆಗಳು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಿದ್ದರು. ಆದರೆ ಹರಪನಹಳ್ಳಿ ಹಾಗೂ ಹರಿಹರ ತಾಲೂಕಿನಲ್ಲಿ ಆಮ್ಲಜನಕ ಘಟಕಕ್ಕೆ ಯಾರು ಮುಂದಾಗಲಿಲ್ಲ‌. ಇಂತಹ ಸಂದರ್ಭದಲ್ಲಿ ನಮ್ಮ ತಂದೆ, ತಾಯಿಗಳ ಸ್ಮಣಾರ್ಥವಾಗಿ ನಮ್ಮ ಚಾರಿಟಿ ಟ್ರಸ್ಟ್ನಿಂದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಿದ್ದೇನೆ. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ ಎಂದರು.

ನರೇಂದ್ರ ಮೋದಿ ಗ್ಯಾರಂಟಿ: ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ದೇಶದಲ್ಲಿ ಸೇವೆಯನ್ಬು ಮಾಡುತ್ತಿರುವ ನರೇಂದ್ರ ಮೋದಿಯವರು ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರದ ಸಾಲದ ನೆರವು, ಉಚಿತ ಅಕ್ಕಿ ವಿತರಣೆ, ವಿಶ್ವಕರ್ಮ ಯೋಜನೆ, ಕಿಸಾನ್ ಸನ್ಮಾನ ಯೋಜನೆ, ಆಯುಷ್ಮಾನ ಭಾರತ, ಜನ ಔಷಧಿ, ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಇದು ದೇಶದ ಜನರಿಗೆ ಗ್ಯಾರಂಟಿಯಾಗಿದ್ದಾರೆ ಎಂದರು.

ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ವಿಶ್ವದಲ್ಲಿ ಆರ್ಥಿಕ ಅಭಿವೃದ್ದಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲಿದೆ ಎಂದ ಅವರು, ನಾನು ಇಪ್ಪತ್ತು ವರ್ಷದಿಂದ ಸಂಸದರಾಗಿ ನನ್ನ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಲ್ಲಿ ಅನುದಾನ ಬಳಕೆ ಮಾಡಿದ್ದೇನೆ ಎಂದು ಹೇಳಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಯಿಂದ ಸಂಸದರನ್ನು ಸನ್ಮಾನಿಸಿ ಗೌರವಿಸಲಾಯಿತು. ಮರಿಯಮ್ಮನಹಳ್ಳಿ ರಂಗಸಂಸ್ಕೃತಿ ಕಲಾತಂಡ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಿರುನಾಟಕ ಪ್ರದರ್ಶಿಸಿತು.ಈ ಸಂದರ್ಭದಲ್ಲಿ ಮುಖಂಡರಾದ ಪುರಸಭೆ ಮಾಜಿ ಅದ್ಯಕ್ಷ ಹೆಚ್.ಎಂ.ಅಶೋಕ, ಅರುಂಡಿ ನಾಗರಾಜ್, ಪಿ.ಮಹಾಬಲೇಶ್ವರಗೌಡ್ರು, ಕುಸುಮಾ ಜಗದೀಶ, ಗಿರಿರಾಜ ರೆಡ್ಡಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ, ಡಿಹೆಚ್‌ಓ, ಎಲ್.ಆರ್.ಶಂಕರನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಹಾಲಸ್ವಾಮಿ, ಮುಖ್ಯ ವೈಧ್ಯಾಧಿಕಾರಿ ಶಂಕರನಾಯ್ಕ, ಸಹಾಯಕ ಆಡಳಿತಾಧಿಕಾರಿ ವೆಂಕಟೇಶ ಬಾಗಲಾರ, ಮುತ್ತಿಗಿ ವಾಗೀಶ, ಉದಯಶಂಕರ, ಈಶ್ವರ, ಸೇರಿದಂತೆ ಇತರರು ಇದ್ದರು.

Share.
Leave A Reply

Exit mobile version