![](https://davangerevijaya.com/wp-content/uploads/2024/07/IMG-20240719-WA01231.jpg)
ದಾವಣಗೆರೆ : ದೇವನಗರಿ ದಾವಣಗೆರೆಯಲ್ಲಿ ದುಗ್ಗಮ್ಮ ಜಾತ್ರೆಗೆ ಕ್ಷಣಗಣನೆ ಶುರುವಾಗಿದ್ದು, ಹಳೆ ದಾವಣಗೆರೆ ಸೇರಿದಂತೆ ಹೊಸ ದಾವಣಗೆರೆಯಲ್ಲಿ ಕುರಿಗಳು ಮನೆಗೆ ಬಂದಿಳಿದಿವೆ.ಚರಗ ಚೆಲ್ಲಿದ ನಂತರ ದುಗ್ಗಮ್ಮ ಜಾತ್ರೆ ದಾವಣಗೆರೆಯಲ್ಲಿ ಶುರುವಾಗಲಿದ್ದು, ತಿಂಗಳುಗಳ ಕಾಲ ಮಟನ್ ಘಾಟು ಬರಲಿದೆ.
ಈಗಾಗಲೇ ದುಗ್ಗಮ್ಮನ ಹಬ್ಬಕ್ಕೆ ನೆಂಟರಿಷ್ಟರಿಗೆ ಬರುವಂತೆ ದೂರವಾಣಿ ಕರೆ ಮಾಡಲಾಗಿದೆ. ಈ ನೆಂಟರಿಷ್ಟರು, ಒಂದು ವಾರ, ತಿಂಗಳುಗಳ ಕಾಲ ಊರಲ್ಲೇ ಇರುವ ಕಾರಣ ಹಬ್ಬಕ್ಕೆ ಕುರಿ ಊಟ ಖಾಲಿಯಾದರೂ, ಮತ್ತೆ ಅಂಗಡಿಯಿಂದ ಮಟನ್ ತರುವುದು ವಿಶೇಷ. ಹೀಗಾಗಿ ಜಾತ್ರೆಯ ನಿಮಿತ್ತ ಮನೆಗೆ ತಂದಿದ್ದ ಕುರಿಗಳೆಲ್ಲ ಖಾಲಿಯಾಗಿ, ನೆಂಟಿಷ್ಟರ, ಸ್ನೇಹಿತರ ಹೊಟ್ಟೆ ತುಂಬಿಸಲಿವೆ . ಅಲ್ಲದೇ ಬಾಡೂಟಕ್ಕೆ ಮಾರುಕಟ್ಟೆ ವಹಿವಾಟು ಸಹ ವಿಸ್ತಾರಗೊಳ್ಳಲಿದೆ.
ಕುರಿ ದರ ಹೆಚ್ಚಳ
![](https://davangerevijaya.com/wp-content/uploads/2024/07/IMG-20240715-WA0352.jpg)
ಜಾತ್ರೆ ನಿಮಿತ್ತ ಕುರಿ ಬೆಲೆ ಏರಿಕೆಯಾಗಿದ್ದು, ಕೆಲವರು ಎರಡು ಹಲ್ಲಿನ ಟಗರನ್ನು 8-14ಸಾವಿರ, ನಾಲ್ಕು ಹಲ್ಲಿನ ಕುರಿಗೆ 13-18ಸಾವಿರ, ಆರು ಹಲ್ಲಿನ ಕುರಿಗೆ 18-25 ಸಾವಿರ ಮತ್ತು 8 ಹಲ್ಲಿನ ಕುರಿಗೆ 20 – 30ಸಾವಿರ ರೂ. ನೀಡಿ ಖರೀದಿಸಿ ತಂದಿದ್ದಾರೆ. ಇನ್ನು ಕುರಿ ಮಾಂಸ ಕೆಜಿಗೆ 800 ರಿಂದ 900ರೂ. ಇದೆ. ಹೀಗಿದ್ದರೂ ಬಡವರು ಸೇರಿದಂತೆ ಎಲ್ಲರೂ ಸಾಲ ಮಾಡಿದರೂ, ಕುರಿಗಳನ್ನು ತಂದಿದ್ದಾರೆ.
ಈರುಳ್ಳಿ ದರ ಕಡಿಮೆ ನಿಂಬೆ ಹಣ್ಣು ದರ ಜಾಸ್ತಿ
ಬಾಡೂಟ ಸಿದ್ಧಪಡಿಸಲು ನಿಂಬೆ ಹಣ್ಣು, ಈರುಳ್ಳಿ ಅವಶ್ಯ. ಇವುಗಳನ್ನು ಜನರು ಚೀಲಗಟ್ಟಲೆ ಈಗಾಗಲೇ ಖರೀದಿಸುತ್ತಿದ್ದಾರೆ. ಆಂಧ್ರಪ್ರದೇಶ, ವಿಜಾಪುರದಿಂದ ನಗರಕ್ಕೆ ನಿಂಬೆ ಹಣ್ಣು ಬಂದಿದ್ದು, ಒಂದು ಚೀಲದಲ್ಲಿ 1500 ಹಣ್ಣು ಇರುತ್ತದೆ. ಚೀಲವೊಂದಕ್ಕೆ 1200ರಿಂದ 1500 ರೂ.ವರೆಗೂ ಬೆಲೆ ಇದೆ ಎಂದು ವ್ಯಾಪಾರಿ ಚಂದ್ರಪ್ಪ ಹೇಳುತ್ತಾರೆ
ಚರ್ಮ ವ್ಯಾಪಾರಿಗಳು ಸಹ ನಗರಕ್ಕೆ ಆಗಮನ
ನಗರಕ್ಕೆ ಚರ್ಮ ವ್ಯಾಪಾರಿಗಳು ಸಹ ಈಗ ದಾಂಗುಡಿಯಿಟ್ಟಿದ್ದು, ಟಗರು, ಕುರಿ ಚರ್ಮ ಖರೀದಿಸಲು ಸಜ್ಜಾಗಿದ್ದಾರೆ. ಒಂದು ಕುರಿಯ ಚರ್ಮ 300 ರೂ.ನಿಂದ 450 ರೂವರೆಗೂ ಮಾರಾಟ ಆಗಲಿದೆ. ಅಂದಾಜಿನ ಪ್ರಕಾರ 30ರಿಂದ 40 ಸಾವಿರ ಕುರಿ ಬಲಿಯಾಗಿದ್ದು ಚರ್ಮ ಮಾರುಕಟ್ಟೆಯೂ ಕೊಂಚ ವಿಸ್ತಾರಗೊಳ್ಳಲಿದೆ.
ಸಾಣೆಗೂ ಡಿಮ್ಯಾಂಡ್
ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇತರೆಡೆಯಿಂದ ಸಾಕಷ್ಟು ಸಾಣೆ ಹಿಡಿಯುವ 10ಕ್ಕೂ ಹೆಚ್ಚು ಕಾರ್ಮಿಕರು ದಾವಣಗೆರೆ ಬಂದಿದ್ದಾರೆ. ಒಂದು ಮಚ್ಚು, ಚಾಕು, ಕತ್ತಿ ಸಾಣೆ ಹಿಡಿಯಲು 10ರಿಂದ 50 ರೂ. ನಿಗದಿ ಪಡಿಸಿದ್ದಾರೆ.
ಖಾರದ ಮಿಲ್ಗಳು ಬ್ಯೂಸಿ:
ಮಸಾಲೆ ಜತೆಗೆ ಖಾರಕ್ಕಾಗಿ ಕೆಆರ್ ಮಾರುಕಟ್ಟೆ, ಮಂಡಿಪೇಟೆ, ಚೌಕಿಪೇಟೆ ಸೇರಿದಂತೆ ಇತರೆಡೆ ಗುಂಟೂರು ಮೆಣಸಿನಕಾಯಿ, ಬ್ಯಾಡಗಿ, ಸಾಧಾರಣ ಖಾರವುಳ್ಳ ದ್ಯಾವನೂರು ಮೆಣಸಿಕಾಯಿ ಖರೀದಿಸುತ್ತಿದ್ದಾರೆ. ಒಂದೊಂದು ಕುಟುಂಬಗಳು ಕನಿಷ್ಟ ಹತ್ತರಿಂದ ಇಪ್ಪತ್ತು ಕೆಜಿವರೆಗೂ ಮೆಣಸಿನಕಾಯಿ ಖರೀದಿಸಿದ್ದಾರೆ. . ಪ್ರಸ್ತುತ ಕೆಜಿಗೆ 150ರಿಂದ 200ರೂ. ಬೆಲೆ ಇದೆ. ಖಾರದ ಪುಡಿ ಕುಟ್ಟುವ ಮಿಲ್ಗಳಲ್ಲಿ ಈಗಾಗಲೇ ಜನರು ತುಂಬಿ ತುಳುಕುತ್ತಿದ್ದಾರೆ . ಕೆಜಿ ಖಾರ, ಮಸಾಲೆ ಪುಡಿ ಮಾಡಲು 50 ರೂಗಳಿಂದ 70 ರೂ. ದರ ನಿಗದಿ ಮಾಡಲಾಗಿದೆ. ಗಾಂಧಿನಗರ, ಜಾಲಿನಗರ, ಚೌಡೇಶ್ವರಿನಗರ, ವಿನೋಭ ನಗರ, ಕೆಟಿಜೆ ನಗರ, ಹಳೇಪೇಟೆ, ದೊಡ್ಡಪೇಟೆ, ಎಸ್ಪಿಎಸ್ ನಗರ, ತಳವಾರ ಕೇರಿ, ಎಸ್ಎಸ್ಎಂ ನಗರ, ಕುರುಬರ ಕೇರಿ ಸೇರಿದಂತೆ ಹಲವೆಡೆ ಬಾಡೂಟದ ಸಂಭ್ರಮ ಜೋರಾಗಿದ್ದು, ಬಾಡೂಟದ ವಿಶೇಷದಿಂದ ಕೂಡಿರುವ ಈ ಜಾತ್ರೆ ಖದರ್ ಇನ್ನಷ್ಟು ಹೆಚ್ಚಲಿದೆ.
………
ದುಗ್ಗಮ್ಮ ಜಾತ್ರೆ ನಿಮಿತ್ತ ಈಗಾಗಲೇ ಸಿದ್ದತೆ ನಡೆಯುತ್ತಿದೆ. ಈ ಬಾರಿ ಅದ್ದೂರಿಯಾಗಿ ನಗರದ ಕುಸ್ತಿ ಆಟ ನಡೆಯಲಿದೆ. ಎರಡು ದಿನಗಳ ಕಾಲ ಈ ಕುಸ್ತಿ ಆಟ ಇರಲಿದೆ. ಹರಿಯಾಣ, ಹುಬ್ಬಳ್ಳಿ, ಧಾರವಾಡ, ಬೆಳಗಾಂ ಸೇರಿದಂತೆ ಇತರೆಡೆಯಿಂದ ಕುಸ್ತಿ ಪಟುಗಳು ಬರುವರು. ಸುಮಾರು ಸಾವಿರಕ್ಕೂ ಹೆಚ್ಚು ಜನರಿ ಕ್ರೀಡಾಪಟುಗಳು ಭಾಗಹಿಸುವರು.
ಯಶವಂತರಾವ್ ಜಾಧವ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ
![](https://davangerevijaya.com/wp-content/uploads/2024/07/IMG-20240716-WA0138.jpg)