ಶಿವಮೊಗ್ಗ,ಜೂ.5: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭಾರಿ ಬಹುಮತದಿಂದ ಗೆದ್ದಿದ್ದು, ಅವರಿಗೆ ಜಿಲ್ಲಾ ಜೆಡಿಎಸ್ ಅಭಿನಂದಿಸುವುದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಘವೇಂದ್ರ ಅವರು ಮೂರು ಬಾರಿ ಸಂಸದರಾಗಿ ಜಿಲ್ಲೆಗೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಜಿಲ್ಲೆಯ ರಸ್ತೆ, ವಿಮಾನ ನಿಲ್ದಾಣ, ಸಮುದಾಯ ಭವನಗಳು, ರೈಲ್ವೆ ಮೇಲ್ಸೆತುವೆಗಳು, ಪ್ರವಾಸೋಧ್ಯಮ ಅಭಿವೃದ್ಧಿ, ದೂರ ಸಂಪರ್ಕ ಕ್ರಾಂತಿ, ಅನೇಕ ರೈಲು ಸಂಚಾರಗಳು ಸೇರಿದಂತೆ ಅಭಿವೃದ್ಧಿಯ ಮಹಾಪೂರ ಹರಿಸಿದ್ದು, ಕ್ಷೇತ್ರದ ಜನತೆ ಅವರ ಕೈಯಿಡಿದಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಬಿಜೆಪಿಯೊಂದಿಗೆ ಅವರ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಶಾಸಕಿ ಶಾರದಪೂರ್ಯನಾಯ್ಕ್ ಮಾತನಾಡಿ, ಜೆಡಿಎಸ್‍ನ ಹಿರಿಯ ನಾಯಕರ ಸಲಹೆಯಂತೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಜಿಲ್ಲೆಯ ಮತದಾರರು ಅಭಿವೃದ್ಧಿ ದೃಷ್ಠಿಯಿಂದ ರಾಘವೇಂದ್ರ ಅವರಿಗೆ ಬೆಂಬಲಿಸಿದ್ದಾರೆ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅವರಿಂದ ನಿರಿಕ್ಷಿಸುತ್ತಿದ್ದೇವೆ. ಕೇಂದ್ರ ಸರ್ಕಾರ ನರೇಂದ್ರ ಮೋದಿ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಕೊಡುಗೆಯನ್ನು ಜಿಲ್ಲೆಗೆ ನೀಡಲಿ. ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳನ್ನು ಸಂಸದರ ನೇತೃತ್ವದಲ್ಲಿ ಬಗೆಹರಿಸಲಿ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಚುನಾವಣೆ ಗೆದ್ದ ಸಂಸದ  ಬಿ.ವೈ.ರಾಘವೇಂದ್ರರಿಗೂ ಮತ್ತು ಹಗಲಿರುಳು ಗೆಲುವಿಗೆ ಶ್ರಮಿಸಿದ ಎರಡು ಪಕ್ಷದ ಕಾರ್ಯಕರ್ತರಿಗೆ ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ. ಮೈತ್ರಿ ಯಶಸ್ವಿಯಾಗಿದೆ. ಕಾಂಗ್ರೆಸ್ ನಾಯಕರ ಗ್ಯಾರಂಟಿ ಕಾರ್ಯರೂಪಕ್ಕೆ ಬಂದಿಲ್ಲ. ಅವರ ಡಬ್ಬಲ್ ಡಿಜಿಟ್ ಗೆಲುವು ಸಿಕ್ಕಿಲ್ಲ. ರಾಜ್ಯದ ಜನತೆ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಬೇಸತ್ತಿದ್ದಾರೆ.  ಅಧಿಕಾರಿಗಳು ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸದೇ ಅಭಿವೃದ್ಧಿಯ ಕಡೆಗೆ ತುರ್ತು ಗಮನ ನೀಡಲಿ. ಗ್ಯಾರಂಟಿ ನಿಲ್ಲಿಸಿ ಜನರಿಗೆ ಮೋಸ ಮಾಡುವುದು ಬೇಡ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಯ್ಯ, ತ್ಯಾಗರಾಜ್, ಗೀತಾ ಸತೀಶ್, ದೀಪಕ್‍ಸಿಂಗ್, ಎಸ್.ಎಲ್. ನಿಖಿಲ್, ಗಂಧದಮನೆ ನರಸಿಂಹ, ವಿನಯ್ ಮತ್ತಿತರರು ಇದ್ದರು.
Share.
Leave A Reply

Exit mobile version