ಜಗಳೂರು: ದಶಕಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ಕೆನರಾಬ್ಯಾಂಕ್ ತೊಡಗಿಸಿಕೊಂಡಿದ್ದು, ಪ್ರತಿ ವರ್ಷದ ಲಾಭಾಂಶದಲ್ಲಿ ಸರ್ಕಾರಿ ಶಾಲೆಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಕೆನರಾಬ್ಯಾಂಕ್ ವಿಜಯಪುರ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕರಾದ ಕಿರಣ್ ಎನ್.ಎಸ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕೆನರಾಬ್ಯಾಂಕ್ ವತಿಯಿಂದ ರೂ 1.5 ಲಕ್ಷ ಮೊತ್ತದ 30 ಬೆಂಚ್ ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.

ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿ ಯೋಜನೆಯಡಿ ಪ್ರತಿ ವರ್ಷ ಬ್ಯಾಂಕ್ ವತಿಯಿಂದ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರಸ್ತುತ ನಾನು ಬ್ಯಾಂಕ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, 1980ರ ದಶಕದಲ್ಲಿ ಇದೇ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಭ್ಯಾಸ ಮಾಡಿದ್ದೇನೆ. ಈ ಸರ್ಕಾರಿ ಶಾಲೆಯಲ್ಲಿ ಓದಿದ್ದರಿಂದ ಇಂದು ನಾನು ಉನ್ನತ ಅಧಿಕಾರಿಯಾಗಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಎಲ್ಲರೂ ಕಷ್ಟಪಟ್ಟು ಓದಿ ಉನ್ನತ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಾನು ಇಲ್ಲಿ ಓದುತ್ತಿದ್ದಾಗ ಸುಮಾರು 700 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಸಂಖ್ಯೆ ಕುಸಿಯಲು ಕಾರಣವೇನು ಎಂಬ ಬಗ್ಗೆ ಚರ್ಚೆ ನಡೆಯಬೇಕು ಎಂದರು.

‘ ಬ್ಯಾಂಕ್ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಹಿತದೃಷ್ಟಿಯಿಂದ ಕುಡಿಯುವ ನೀರು, ನೋಟ್ ಪುಸ್ತಕ, ಬೆಂಚ್ ಸೇರಿದಂತೆ ಹಲವು ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ ಎಂದು ಕೆನರಾಬ್ಯಾಂಕ್ ಜಗಳೂರು ಶಾಖೆಯ ವ್ಯವಸ್ಥಾಪಕ ಹನುಮಂತ ಬೈರಗೊಂಡ ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಮಾರಪ್ಪ, ಬಿ.ಆರ್.ಸಿ. ಸಂಪನ್ಮೂಲ ವ್ಯಕ್ತಿಗಳಾದ ಅಂಜಿನಪ್ಪ, ಲೋಕೇಶ್, ಮಂಜುನಾಥ್, ಮುಖ್ಯ ಶಿಕ್ಷಕ ರಂಗನಾಥ್, ಸಹಶಿಕ್ಷಕಿ ಎಸ್.ಕೆ. ಪುಷ್ಪಾವತಿ, ಜಿ. ನೃತ್ರಮ್ಮ, ಟಿ. ಉಮಾದೇವಿ ಇದ್ದರು.

Share.
Leave A Reply

Exit mobile version