ಶಿವಮೊಗ್ಗ,ಜೂ.5: ಚುನಾವಣೆ ಮುಗಿದಿದೆ. ಬೇಸರಗಳು ಸಾಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡು ಸೇರಿಕೊಂಡು ರಾಜ್ಯದ ರೈತರ ಮತ್ತು ಇತರ ಸಮಸ್ಯೆಗಳತ್ತ ಗಮನಹರಿಸೋಣ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 18ನೇ ಲೋಕಸಭಾ ಮಹಾಚುನಾವಣೆ ಮುಗಿದಿದೆ. ಸ್ವಾತಂತ್ರ್ಯದ ನಂತರದ ಕಾಂಗ್ರೇಸ್ಸೇತರ ಪಕ್ಷವೊಂದು 3ನೇ ಬಾರಿ ಸರ್ಕಾರ ರಚಿಸುತ್ತಿದೆ. ಇದಕ್ಕೆಲ್ಲ ಕಾರಣರಾದ ಮತದಾರರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಅಭಿನಂದನೆ ಎಂದರು.
ಚುನಾವಣೆ ಮುಗಿದಿದೆ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳು ಉಳಿದುಕೊಂಡಿವೆ. ಶರಾವತಿ ಸಂತ್ರಸ್ಥರ ಸಮಸ್ಯೆ, ವಿ.ಐ.ಎಸ್.ಎಲ್. ಸಮಸ್ಯೆ, ಅರಣ್ಯ ಮತ್ತು ಬಗರ್‍ಹುಕುಂದಾರರ ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂಧಿಸಬೇಕಾಗಿದೆ. ರಾಜ್ಯ ಸರ್ಕಾರದ ನೆರವು ಕೂಡ ಬೇಕಾಗುತ್ತದೆ. ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಬರಬೇಕು. ಅಭಿವೃದ್ಧಿಯ ಮೂಲಕವೇ ಜನರ ಋಣ ತೀರಿಸಬೇಕು. ಆ ನಿಟ್ಟಿನಂತ ಮತ್ತಷ್ಟು ಪ್ರಾಮಾಣಿಕವಾಗಿ ಸೇವೆ ಮಾಡುವೆ ಎಂದರು.
ಕಾಂಗ್ರೆಸ್ 20 ಸ್ಥಾನಗಳಲ್ಲಿ ಬರುವುದಾಗಿ ಹೇಳಿಕೊಂಡಿತು. ಆದರೆ 9 ಸ್ಥಾನಕ್ಕೆ ಸೀಮಿತವಾಗಿದೆ. ಕಾಂಗ್ರೆಸ್‍ಗೆ ಮುಖಭಂಗವಾಗಿದೆ. ಮತದಾರರು ನರೇಂದ್ರ ಮೋದಿಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಜೆಡಿಎಸ್ ಬೆಂಬಲ ಕೂಡ ನಮಗೆ ಇದಿದ್ದರಿಂದ ರಾಜ್ಯದಲ್ಲಿ ನಾವು ಅತಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿಯವರು ನನ್ನ ಕ್ಷೇತ್ರದಲ್ಲಿ 2 ಬಾರಿ ಬಂದು ಪ್ರಚಾರ ಮಾಡಿದರು ಎಂದರು.
ಬೈಂದೂರು ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನನಗೆ ಅತ್ಯಧಿಕ ಮತವನ್ನು ನೀಡಿದ್ದಾರೆ. ಹಾಗೆ ನೋಡಿದರೆ ಶಿಕಾರಿಪುರದಲ್ಲಿ ಸ್ವಲ್ಪ ಅಂತರ ಕಡಿಮೆ ಯಾಗಿರಬಹುದು. ಆದರೆ ಉಳಿದೆಲ್ಲ ಕಡೆ ಹೆಚ್ಚಾಗಿದೆ. ಅದೇಕೋ ಶಿಕಾರಿಪುರದ ಜನ 87 ಸಾವಿರಕ್ಕಿಂತ ಹೆಚ್ಚು ಮತವನ್ನು ಬಿಜೆಪಿಗೆ ನೀಡುತ್ತಿಲ್ಲ ಎಂದರು.
ಶಿವಮೊಗ್ಗದಲ್ಲಿ ಮಾಧಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಯುವಶಕ್ತಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಅದು ಮರುಕಳಿಸಬಾರದು. ಹಾಗಾಗಿ ಸರ್ಕಾರದ ಜವಬ್ದಾರಿ ಹೆಚ್ಚಾಗಿದೆ. ಜೊತೆಗೆ ಮುಂಗಾರು ಕ್ಷೀಣಿಸಿದೆ. ಇದೆಲ್ಲದರ ಮಧ್ಯೆ ನಮ್ಮ ಜವಾಬ್ದಾರಿಕೂಡ ಹೆಚ್ಚಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಪ್ರವಾಸೋಧ್ಯಮಕ್ಕೂ ಹೆಚ್ಚು ಒತ್ತು ಕೊಡುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರುದ್ರೇಗೌಡರು, ಎಸ್.ಎನ್. ಚನ್ನಬಸಪ್ಪ, ಗಿರೀಶ್ ಪಟೇಲ್, ಆರ್.ಕೆ.ಸಿದ್ರಾಮಣ್ಣ, ಟಿ.ಡಿ.ಮೇಘರಾಜ್, ದತ್ತಾತ್ರಿ, ಕೆ.ಜಿ.ಕುಮಾರಸ್ವಾಮಿ, ಅಶೋಕ್‍ನಾಯಕ್, ಎಂ.ಜೆ.ರಾಜಶೇಖರ್, ಡಾ.ಧನಂಜಯಸರ್ಜಿ, ಹರಿಕೃಷ್ಣ, ನಾಗರಾಜ್, ಮಧುಸೂದನ್, ಮಾಲತೇಶ್, ಅಣ್ಣಪ್ಪ, ಮೋಹನ್‍ರೆಡ್ಡಿ, ಶಿವಣ್ಣ, ಉಮೇಶ್ ಇದ್ದರು.
Share.
Leave A Reply

Exit mobile version