![](https://davangerevijaya.com/wp-content/uploads/2024/07/IMG-20240719-WA01231.jpg)
- ಚಿಕ್ಕ ವಯಸ್ಸಿಗೆ ಗಾಂಜಾ ದಾಸರವಾಗುತ್ತಿರುವ ಯುವಪಡೆ
- ಮೆಡಿಕಲ್ ಕಾಲೇಜ್, ವಸತಿ ನಿಲಯಗಳೇ ಟಾರ್ಗೇಟ್
ನಂದೀಶ್ ಭದ್ರಾವತಿ ದಾವಣಗೆರೆ: ಯಾರಾದ್ರೂ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಶುಭ ಸಮಾರಂಭದಲ್ಲಿ ಭಾಗವಹಿಸಿದ್ದ ಪೋಷಕರನ್ನು ಕೇಳಿದ್ರೆ..ಪೋಷಕರು ಹೆಮ್ಮೆಯಿಂದ ನನ್ನ ಮಕ್ಕಳು ದಾವಣಗೆರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್, ಎಂಜಿನಿಯರ್, ಸೈನ್ಸ್, ಡಿಪ್ಲೋಮಾ ಓದುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ..ಆದರೆ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ…ಇದಕ್ಕಾಗಿ ದಾವಣಗೆರೆಯಲ್ಲಿ ನಡೆದ ಪ್ರಕರಣವೊಂದು ಸಾಕ್ಷಿಯಾಗಿದೆ.
ಹೌದು…ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನೊಂದರಲ್ಲಿ ಗಾಂಜಾ ನಶೆಯಲ್ಲಿದ್ದ ವಿದ್ಯಾರ್ಥಿಯ ಮೆಲಕಿನಾಟವನ್ನು ನಾವೆಲ್ಲ, ಕೇಳಿದ್ದೇವೆ, ನೋಡಿದ್ದೇವೆ…ಆದರೆ ದಾವಣಗೆರೆಯಲ್ಲಿ ಇಂತಹ ಪ್ರಕರಣ ನಡೆಯದೇ ಹೋದರೂ, ವಿದ್ಯಾರ್ಥಿಯೊಬ್ಬ ಪೆಡ್ಲರ್ ಬಳಿ ಗಾಂಜಾ ಪಡೆಯಲು ಹೋಗಿ ಕೆಟಿಜೆ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
![](https://davangerevijaya.com/wp-content/uploads/2024/07/IMG-20240715-WA0352.jpg)
ಐಟಿಐ ಕಾಲೇಜು ಆವರಣ ಪೆಡ್ಲರ್ ಗಳ ಅಡ್ಡ
ನಗರದ ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿ, 490 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯವರು ಬಂಧಿತರು
ಹಾವೇರಿಯ ನಗರ ವಾಸಿ ಆಟೋ ಚಾಲಕ ಗಗನ್ ಆನವಟ್ಟಿ (26) ಮತ್ತು ರಾಣೇಬೆನ್ನೂರು ತಾಲ್ಲೂಕಿನ ಸುಜಲ್.ಎಸ್. ಜೈನ್ (19) ಬಂಧಿತ ಆರೋಪಿಗಳು.
ಯಾರು ಈ ಕಾಲೇಜು ವಿದ್ಯಾರ್ಥಿಗಳು
ರಾಣೆಬೆನ್ನೂರಿನ ಸುಜಲ್ ಎಸ್. ಜೈನ್ ದಾವಣಗೆರೆಯ ಕಾಲೇಜೊಂದರಲ್ಲಿ ಬಿಸಿಎ ಓದುತ್ತಿದ್ದು, ನಶೆಗಾಗಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ. ಇನ್ನು ಹಾವೇರಿಯ ಆಟೋ ಚಾಲಕ ಗಗನ್ ಆನವಟ್ಟಿ ವಿರುದ್ಧ ಈಗಾಗಲೇ ಗಾಂಜಾ ಮಾರಾಟ ಪ್ರಕರಣ ಸಂಬಂಧ ಹಾವೇರಿಯಲ್ಲಿ ಎನ್ ಡಿಆರ್ ಪಿ ಆ್ಯಕ್ಟ್ ನಡಿ ಮೊಕದ್ದಮೆ ದಾಖಲಾಗಿದೆ. ಈತ ಹಣಕ್ಕಾಗಿ ಸಣ್ಣ, ಸಣ್ಣ ಪ್ಯಾಕೇಟ್ ಗಳನ್ನಾಗಿ ಮಾರಾಟ ಮಾಡುತ್ತಿದ್ದ.ಬಂಧಿತರಿಂದ 15 ಸಾವಿರ ರೂ ಮೌಲ್ಯದ 490 ಗ್ರಾಂ ಗಾಂಜಾ ಮತ್ತು 1.50 ಲಕ್ಷ ರೂ ಮೌಲ್ಯದ ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ.
ಐಟಿಐ ಕಾಲೇಜು ಗಾಂಜಾ ಅಡ್ಡ
ದಾವಣಗೆರೆ ಹದಡಿ ರಸ್ತೆಯಲ್ಲಿರುವ ಐಟಿಐ ಕಾಲೇಜು ಗಾಂಜಾ ಮಾರಾಟದ ಅಡ್ಡವಾಗಿತ್ತು. ಈ ಕಾಲೇಜು ಸುತ್ತಮುತ್ತ ಖಾಲಿ ಜಾಗ, ಕತ್ತಲಿದ್ದ ಕಾರಣ ಈ ಜಾಗವನ್ನು ಪೆಡ್ಲರ್ ಆಯ್ಕೆ ಮಾಡಿದ್ದರು. ಈ ಸಂಬಂಧ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಹೋಗಿದೆ. ನಂತರ ಖಚಿತ ಮಾಹಿತಿ ಆಧರಿಸಿ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ಡಿ, ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು ಜೆ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಾಗರ್ ಅತ್ತರವಾಲ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳ ಸಹಿತ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಎಲ್ಲಿಂದ ಬರುತ್ತೇ ಗಾಂಜಾ
ಈ ಹಿಂದಿನ ಪ್ರಕರಣ ನೋಡಿದಾಗ ದಾವಣಗೆರೆಗೆ ನಾಲ್ಕು ಭಾಗಗಳಿಂದ ಗಾಂಜಾ ಸಪ್ಲೆ ಆಗುತ್ತಿದೆ…ಮೊದಲಿನೆಯೇದಾಗಿ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಕಾಡುಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು, ಅಲ್ಲಿಂದ ಶಿವಮೊಗ್ಗ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಮೂಲಕ ದಾವಣಗೆರೆ ತಲುಪುತ್ತಿದೆ, ಇನ್ನೋಂದು ಭಾಗದಲ್ಲಿ ರಾಯಚೂರು, ಬಳ್ಳಾರಿ,ಹರಪನಹಳ್ಳಿ, ಹರಿಹರದ ಮೂಲಕ ದಾವಣಗೆರೆಗೆ ಬರುತ್ತಿದೆ…ಇನ್ನು ಆಂದ್ರ, ತೆಲಂಗಾಣ,ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗದ ಮೂಲಕ ದಾವಣಗೆರೆಗೆ ಬರುತ್ತಿದೆ. ಇನ್ನೂ ಗೋವಾ, ಬೆಳಗಾಂ,ಹುಬ್ಬಳ್ಳಿ, ಹಾವೇರಿ ಮೂಲಕ ದಾವಣಗೆರೆಗೆ ಗಾಂಜಾ ಸಪ್ಲೆ ಆಗುತ್ತಿದ್ದು,ಹೊರ ರಾಜ್ಯದ ಒರಿಸ್ಸಾದಿಂದಲೂ ವಿದ್ಯಾಕಾಶಿಗೆ ಗಾಂಜಾ ಸಪ್ಲೆ ಆಗುತ್ತಿದೆ. ಪರಿಣಾಮ ವಿದ್ಯಾ ಕಾಶಿ ಗಾಂಜಾ ಕೇಂದ್ರ ಪರಿವರ್ತನೆಯಾಗುತ್ತಿದೆ.
ಮೆಡಿಕಲ್ ಕಾಲೇಜು, ವಸತಿ ನಿಲಯ ಅಡ್ಡ
ಸಾಮಾನ್ಯವಾಗಿ ಗಾಂಜಾ ಪೆಡ್ಲರ್ ಗಳು ಮೆಡಿಕಲ್ ಕಾಲೇಜು, ವಸತಿ ನಿಲಯದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮೊದಲು ಚಟ ಹತ್ತಿಸಿ ನಂತರ ಹೆಚ್ಚಿನ ಹಣ ಕೊಟ್ಟು ಗಾಂಜಾ ತೆಗೆದುಕೊಳ್ಳುವಂತೆ ಮಾಡುವುದು ಪೆಡ್ಲರ್ ಗಳ ಪ್ಲಾನ್ ಆಗಿದೆ. ನಶೆಗಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಸುಳ್ಳು ಹೇಳಿ ಹೆಚ್ಚಿನ ಹಣ ಪಡೆದು ಗಾಂಜಾ ಖರೀದಿ ಮಾಡುತ್ತಿದ್ದರು.
ಒತ್ತಡ ಮರೆಯಲು ನಶೆ
ಸಾಮಾನ್ಯವಾಗಿ ಗಾಂಜಾ ಒಡೆದು ಸಿಕ್ಕಿಹಾಕಿಕೊಳ್ಳುವರು ಮೊದಲು ಹೇಳೊದೇ ಒತ್ತಡ ಹೆಚ್ಚಿತ್ತು…ಈ ಒತ್ತಡ ಕಡಿಮೆ ಮಾಡಿಕೊಳ್ಳಲು ಗಾಂಜಾ ಸೇವನೆ ಮಾಡುತ್ತಿದ್ದೇ . ಇದನ್ನು ತೆಗೆದುಕೊಂಡರೆ ಮನಸ್ಸು,ಮೈಂಡ್ ಸ್ವಲ್ಪ ಫ್ರೀಯಾಗುತ್ತದೆ ಎಂದು ಹೇಳುತ್ತಾರೆ. ಈ ಮೂಲಕ ಇತರ ವಿದ್ಯಾರ್ಥಿಗಳನ್ನು ಚಟಕ್ಕೆ ಎಳೆದುಕೊಳ್ಳುತ್ತಾರೆ. ಪೊಲೀಸರು ಸಹ ಪ್ರತಿದಿನ ಕೇಸ್ ಹಾಕಿದರೂ, ಪ್ರಯೋಜನವಿಲ್ಲದಂತಾಗಿದೆ. ಒಟ್ಟಾರೆ ದಾವಣಗೆರೆ ಗಾಂಜಾ ಕೇಂದ್ರವಾಗುತ್ತಿದ್ದು, ಕಡಿವಾಣ ಹಾಕಲು ಎಲ್ಲರ ಶ್ರಮ ಬೇಕಿದೆ.
![](https://davangerevijaya.com/wp-content/uploads/2024/07/IMG-20240716-WA0138.jpg)