ಶಿವಮೊಗ್ಗ,ಜೂ.5: ಬಿಜೆಪಿಯ ದ್ವೇಷದ ರಾಜಕಾರಣವನ್ನು ಜನರು ತಿರಸ್ಕರಿಸಿ ರಾಹುಲ್‍ಗಾಂಧಿಯವರ ಪ್ರೀತಿಗೆ ಬೆಲೆಕೊಟ್ಟು ಸಹಬಾಳ್ವೆಯ ಕಾಂಗ್ರೆಸ್‍ನ್ನು ಜನರು ಬೆಂಬಲಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆಗಳು ಸುಳ್ಳಾಗಿವೆ. ಬಿಜೆಪಿಯ ಪ್ರಾಯೋಜಿತ ಸಮೀಕ್ಷೆಗಳು ಎಂದು ಈಗ ಜನರಿಗೆ ಗೊತ್ತಾಗಿದೆ. ದೇಶದ ಜನತೆ ಬಿಜೆಪಿಯನ್ನು ತಾತ್ವಿಕವಾಗಿ ತಿರಸ್ಕರಿಸಿದ್ದಾರೆ.ಬಿಜೆಪಿಗೆ ಹಿನ್ನಡೆಯಾಗಿರುವುದು ಸ್ಪಷ್ಟವಾಗಿದೆ ಎಂದರು.
ರಾಹುಲ್‍ಗಾಂಧಿಯವರು ಜೊಡೋಯಾತ್ರೆಯ ಮೂಲಕ ಸುಮಾರು 4800 ಕಿ.ಮೀ. ಪಾದಯಾತ್ರೆ ಮಾಡಿ ಜನರ ಪ್ರೀತಿಯನ್ನು ಗಳಿಸಿದ್ದಾರೆ. ದೇಶದಲ್ಲಿ ಧರ್ಮ ಜಾತಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣವನ್ನು ವಿರೋಧಿಸಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನತೆ ನೀಡಿದ ತೀರ್ಪಿಗೆ ತಲೆಬಾಗುತ್ತೇವೆ. ಪಕ್ಷದ ಮೇಲೆ ಅಭಿಮಾನವಿಟ್ಟು ಐದು ಲಕ್ಷಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಅಭಿನಂದಿಸಿದರು.
ಪಕ್ಷದ ಸೂಚನೆಯಂತೆ ಅಭ್ಯರ್ಥಿಯ ಗೆಲುವಿಗಾಗಿ ಆರಂಭದಿಂದಲೂ ಶ್ರಮಿಸಲಾಗಿತ್ತು. ಆದರೆ ಮತದಾರರು ಈ ಬಾರಿಯೂ ಬಿಜೆಪಿ ಪರವಾಗಿ ಒಲವು ತೋರಿದ್ದಾರೆ. ಗೆದ್ದಿರುವ ಸಂಸದ ರಾಘವೇಂದ್ರ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.
ಇನ್ನೋರ್ವ ಮುಖಂಡ ಶಿಕಾರಿಪುರದ ನಾಗರಾಜ ಗೌಡ ಮಾತನಾಡಿ, ಕಾಂಗ್ರೆಸ್‍ಗೆ ಹೆಚ್ಚಿನ ಮತ ನೀಡಿದ್ದಾರೆ. ಐದು ಲಕ್ಷ ಕಡಿಮೆ ಏನಲ್ಲ. ಈ ಬಾರಿ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಬೇಕೆಂದೇ ಮತ ಹಾಕಿದ್ದಾರೆ. ಆದರೂ ಜಾತಿ ಅಭಿಮಾನದಿಂದ ಜನ ಹೊರ ಬಂದಿಲ್ಲ ಎನಿಸುತ್ತಿದೆ ಎಂದರು.
ಯಡಿಯೂರಪ್ಪನವರ ವಿರುದ್ಧ ಗೋಣಿ ಮಾಲತೇಶ್ ಹೆಚ್ಚಿನ ವೋಟ್ ಪಡೆದಿದ್ದರು. ಹೀಗಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರು ಗೆಲ್ಲುವ ನಿರೀಕ್ಷೆಯಲ್ಲಿ ಟಿಕೆಟ್ ನೀಡಲಾಗಿತ್ತು. ನನಗೆ ಟಿಕೆಟ್ ಕೈತಪ್ಪಿದ್ದರಿಂದಾಗಿ ಸ್ವತಂತ್ರ ಸ್ಪರ್ಧೆ ಮಾಡಬೇಕಾಯಿತು. ಆದರೆ ಈಗ ಕಾಂಗ್ರೆಸ್‍ನಲ್ಲಿಯೇ ಇದ್ದು ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಶಿ.ಜು.ಪಾಶ, ಜಿ.ಪದ್ಮನಾಭ್, ಎಸ್.ಎ.ಬಾಬು, ಮುನ್ನಾ, ಮೂರ್ತಿ, ಧೀರರಾಜ್ ಹೊನ್ನವಿಲೆ, ಆಸೀಸ್ ಮಸೂರ್, ಮೂರ್ತಿ ಮತ್ತಿತರರು ಇದ್ದರು.
Share.
Leave A Reply

Exit mobile version