ಭದ್ರಾವತಿ: ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದಾಗ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಅಶೋಕ್‌ನಾಯ್ಕ್ ಹೇಳಿದರು.

ಹೊಳೆಹೊನ್ನೂರು ಸಮೀಪದ ಅರಹತೊಳಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.

ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ನೊಂದಾಯಿಸಿ ಕೊಂಡು ಸಂಘದ ಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಬೇಕು. ಗ್ರಾಮದ ಪ್ರತಿಯೊಬ್ಬರು ಷೇರು ಹಾಕಿ ಖಾತೆ ತೆರೆದು ನಿಯಮಿತವಾಗಿ ವ್ಯವಹರಿಸಬೇಕು. ರೈತರು ಸಂಘದಲ್ಲಿ ದೊರೆಯುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡರೆ ರೈತರು ಆರ್ಥಿಕವಾಗಿ ಸದೃಡವಾಗಬಹುದು. ಜೊತೆಗೆ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್. ಎಲ್ ಷಡಾಕ್ಷರಿ ಮಾತನಾಡಿ, ರೈತಾಪಿಗಳಿಗೆ ಸಹಕಾರಿ ಕ್ಷೇತ್ರದಲ್ಲಿ ವೈವಿದ್ಯಮಯ ಹಣಕಾಸಿನ ನೆರವುಗಳು ಲಭಿಸುತ್ತಿವೆ. ಪ್ರತಿಯೊಬ್ಬರು ಸಹಕಾರಿ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡಬೇಕು. ಕೃಷಿಕರಿಗೆ ಸಿಗುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಸುಸ್ತಿ ಕೃಷಿ ಸಾಲಗಳಿಗೆ ಬಡ್ಡಿ ಮನ್ನಾ ರಿಯಾಯಿತಿ ನೀಡಿದೆ. ನಿಗದಿತ ಸಮಯದಲ್ಲಿ ಸುಸ್ತಿದಾರರು ಅಸಲು ಮೊತ್ತವನ್ನು ಪಾವತಿಸಿ ಋಣ ಮುಕ್ತರಾಗಬಹುದು ಎಂದರು.

ಎ.ಆರ್.ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಸಂಘ ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಮೊದಲನೇ ಹೆಜ್ಜೆಯನ್ನು ಇಡುತ್ತಿದೆ. ಇಲ್ಲಿಯವರೆಗೂ ಸಂಘದ ಅಧಿಕಾರ ವಹಿಸಿಕೊಂಡ ಪ್ರತಿಯೊಬ್ಬರೂ ಸಂಘದ ಏಳಿಗೆಗೆ ಒಂದಿಲ್ಲೊಂದು ರೀತಿ ಪ್ರಯತ್ನ ಪಟ್ಟಿದ್ದಾರೆ. ಅವರು ಮತ್ತು ಸದಸ್ಯರ ಸಹಬಾಗಿತ್ವದ ಫಲವಾಗಿ ನಮ್ಮ ಸಂಘ ಲಾಭಗಳಿಗೆಯ ಕಡೆಗೆ ದಾಪುಗಾಲಿಡುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ನಿರ್ದೇಶಕರ ಮತ್ತು ಗ್ರಾಮದ ಹಿರಿಯರ ಸಹಕಾರದಿಂದ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಮಾಜಿ ಅಧ್ಯಕ್ಷ ಸಿ.ಪಿ ಚಂದ್ರಶೇಖರ್ ಹಾಗೂ ಮಾಜಿ ಉಪಾಧ್ಯಕ್ಷ ಯತೀಶ್ವರಚಾರ್ ರಾಜಿನಾಮೆಯಿಂದ ತೆರವಾಗಿದ್ದ ಅರಹತೊಳಲು ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಆರ್ ಬಸವರಾಜಪ್ಪ. ಉಪಾಧ್ಯಕ್ಷರಾಗಿ ಡಿ.ಹೆಚ್ ಪಾಲಕ್ಷಪ್ಪ ಅವಿರೋದ್ಧವಾಗಿ ಆಯ್ಕೆಯಾದರು.

ಸಹಕಾರ ಇಲಾಖೆಯ ಜಲಜಾಕ್ಷಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಮುಖಂಡರಾದ ರಾಜೇಶ್ ಪಾಟೀಲ್. ಸುಬ್ರಮಣಿ ಮೂಡಬಾಗಿಲು ಚಂದ್ರಶೇಖರ್, ಎ.ಎಂ ಮಲ್ಲಿಕಾರ್ಜುನ್, ಮಹೇಶ್ವಪ್ಪ, ಸಿ.ಪಿ.ಚಂದ್ರಶೇಖರ್, ಎಲ್.ಎಸ್. ರವಿಕುಮಾರ್, ಶೇಖರಪ್ಪ, ಜಯದೇವಪ್ಪ, ಯತೀಶ್ವರಚಾರ್, ರೇಖಾ, ಸಿದ್ದಪ್ಪ, ಎಸ್.ಶ್ರೀನಿವಾಸ್, ಶ್ರೀಧರ್, ಎನ್.ಟಿ. ಸಂಗನಾಥ್, ಎ.ಬಿ.ಮಲ್ಲೇಶಪ್ಪ, ಎ.ಎಮ್.ಹಾಲೇಶಪ್ಪ, ಶಿವಕುಮಾರ್‌ ಪಾಟೇಲ್, ಕೆ.ಆರ್ ಸತೀಶ್, ಕೆ.ರಂಗನಾಥ್ ಸೇರಿದಂತೆ ಇತರರಿದ್ದರು.

Share.
Leave A Reply

Exit mobile version