ದಾವಣಗೆರೆ: ಡಾ.ವಿಷ್ಣು ಪುಣ್ಯಭೂಮಿ ಬೆಂಗಳೂರಿನಲ್ಲಿಯೇ ಸ್ಥಾಪಿಸಬೇಕೆಂದು ಒತ್ತಾಯಿಸಿ ಡಿ. 17 ರಂದು‌  ಬೆಳಗ್ಗೆ 9 ರಿಂದ‌ ನಡೆಯಲಿರುವ  “ಪುಣ್ಯ ಭೂಮಿಗಾಗಿ ಹೋರಾಟ” ಬೃಹತ್ ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲೆಯಿಂದಲೂ ಅಭಿಮಾನಿಗಳು ತೆರಳಲಿದ್ದೇವೆ ಎಂದು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಕೊಂಡಜ್ಜಿ ರಾಜಶೇಖರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಪ್ರತಿಭಟನೆ ನಡೆಯಲಿದೆ. ವಿಷ್ಣು ಅವರು ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶವಾಗಿ ನಾಗರಹಾವು ಚಿತ್ರದಿಂದ ಪೂರ್ಣಪ್ರಮಾಣದ ನಾಯಕನಟನಾಗಿ ಅಭಿನಯಿಸಿ ನಮ್ಮ ಕರ್ನಾಟಕ ಅಲ್ಲದೇ ಬೇರೆ ಬೇರೆ ರಾಜ್ಯ, ದೇಶಗಳಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿದ್ದರು.

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಬೆಂಗಳೂರಿನಲ್ಲಿಯೇ ನಿಧನರಾದ ಹಿನ್ನಲೆಯಲ್ಲಿ ಅವರ ಪುಣ್ಯಭೂಮಿ ನಮ್ಮ ನಾಡಿನ ಬೆಂಗಳೂರಿನಲ್ಲಿಯೇ ಆಗಬೇಕೆಂದು ಹಲವಾರು ಅವರ ಅಭಿಮಾನಿಗಳ ಬಳಗದವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರತಿಭಟನೆಗೆ ದಾವಣಗೆರೆಯ ಅಖಿಲ ಕರ್ನಾಟಕ ಡಾ.ವಿಷ್ಣುವರ್ಧನ್ ಸಂಘ, ಡಾ.ವಿಷ್ಣು ಸೇನೆ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘ, ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿಮಾನಿಗಳ ಸಂಘ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ, ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಅವರು ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಕನ್ನಡ ನಾಡು ನುಡಿ ಭಾಷೆಗಾಗಿ ಎಲ್ಲ ಹಿರಿಯ ನಟರೊಂದಿಗೆ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಕನ್ನಡ ಚಳುವಳಿಗಳಲ್ಲಿ ಭಾಗವಹಿಸಿ ರಾಜ್ಯದಾದ್ಯಂತ ಬೃಹತ್ ರ್ಯಾಲಿ ಮೂಲಕ ಹೋರಾಟ ಮಾಡುತ್ತಾ ಬಂದಿದ್ದರು ಎಂದರು.

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್  ಪುಣ್ಯಭೂಮಿ ಇದ್ದು. ಕೆಲವರು ಸ್ಥಳಾಂತರ ಮಾಡಬೇಕೆಂದು ಹೋರಾಟ ನಡೆಸಿದರು. ಶ್ರೀಮತಿ ಭಾರತಿ ವಿಷ್ಣುವರ್ಧನ್ ಕೂಡಾ ಈ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಲಕ್ಷಾಂತರ ವಿಷ್ಣು ಅಭಿಮಾನಿಗಳಿಗೆ ಮನಸ್ಸಿಗೆ ತುಂಬಾ ನೋವಾಗಿದೆ.

ಈ ಹಿನ್ನಲೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಮ್ಮ ಕನ್ನಡ ನಾಡಿನ ಬೆಂಗಳೂರಿನಲ್ಲಿಯೇ ಆಗಬೇಕು. ಸರ್ಕಾರ ಈ ವಿಷಯವಾಗಿ ಗಮನಹರಿಸಿ ಮುಂದೆ ಆಗಬಹುದಾದ ಕೆಲಸಗಳಿಗೆ ಸಹಾಯ ನೀಡಬೇಕು. ಸರ್ಕಾರವು ಜಾಗ ನೀಡಿ ಅವರ ಪುಣ್ಯಭೂಮಿ ಬೆಂಗಳೂರಿನಲ್ಲಿಯೇ ಆಗುವಂತೆ ಕ್ರಮ ವಹಿಸಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ. ನಮ್ಮಗಳ ಈ ಹೋರಾಟಕ್ಕೆ ಎಲ್ಲಾ ಅಭಿಮಾನಿಗಳ ಸಂಘದವರು ಪ್ರೋತ್ಸಾಹ ನೀಡಿದ್ದಾರೆಂದರು.

ಸುದ್ದಿಗೋಷ್ಠಿಯಲ್ಲಿ ಎಂ.ಮನು, ಜಿ.ಎಚ್.ತಿಮ್ಮೇಶ್, ಯೋಗೀಶ್, ಚಂದ್ರು,ಸತೀಶ್,ವಿಜಯಕುಮಾರ್, ರಂಗನಾಥ್ ಮತ್ತಿತರರಿದ್ದರು.

Share.
Leave A Reply

Exit mobile version