ಜಗಳೂರು: ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸ್ ಹಲ್ಲೆ ಪ್ರಕರಣ ಈಗ ತಾರಕಕ್ಕೆ ಏರುವ ನಡುವೆ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿಯೂ ಸ್ಥಳೀಯ ಸಿಪಿಐರನ್ನು ಅಮಾನತು ಮಾಡುವಂತೆ ವಕೀಲರು ಆಗ್ರಹಿಸಿದ್ದಾರೆ. ಈ ನಡುವೆ ಎಸ್ಪಿ ಉಮಾ ಪ್ರಶಾಂತ್ ತನ್ನ ಸಿಬ್ಬಂದಿ ಪರ ನಿಂತಿರುವುದು ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.
ಠಾಣೆಗೆ ಬಂದ ವಕೀಲರನ್ನು ಕಕ್ಷಿದಾರರ ಎದುರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಪಟ್ಟಣದ ಠಾಣೆ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಎದುರು ವಕೀಲರು ಬೇಡಿಕೆ ಇಟ್ಟಿದ್ದಾರೆ.
ಈ ನಡುವೆ ಪಟ್ಟಣದ ತಾಪಂ ಸಭಾಗಣದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ವಕೀಲರು ಮತ್ತು ಪೊಲೀಸ್ ಮಧ್ಯೆ ಕೆಲ ಕ್ಷಣ ಸಂಘರ್ಷ ಏರ್ಪಟ್ಟಿತ್ತು.
ಏನಿದು ಘಟನೆ
ತಾಲೂಕಿನ ದಿಬ್ಬದಹಟ್ಟಿ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯಗಳ ದೂರುದಾರರು ಠಾಣೆಗೆ ಬಂದಾಗ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ರಾವ್ ಅವರು ನಿಮ್ಮ ಸಮಸ್ಯೆ ಏನೇ ಇದ್ದರೂ ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳಿ ಎಂದು ಕಕ್ಷಿದಾರರ ಎದುರೇ ನಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ವಕೀಲ ಮರೇನಹಳ್ಳಿ ಬಸವರಾಜ್ ಮತ್ತು ಕೊಟ್ರೇಶ್ ದೂರಿದ್ದಾರೆ. ಅಲ್ಲದೇ ಠಾಣೆಗೆ ಬಂದವರನ್ನು ಇನ್ಸ್ಪೆಕ್ಟರ್ ಸರಿಯಾಗಿ ನಡೆಸಿಕೊಳ್ಳುವುದಿಲ್ಲ.
ಪೊಲೀಸ್ ಇಲಾಖೆ ಜನ ಸ್ನೇಹಿ ಎಂದು ಹೇಳುತ್ತಾರೆ. ಆದರೆ ಅವರು ಪಾಲಿಸುತ್ತಿಲ್ಲ. ವಕೀಲರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜನ್ಯ ಮಾಡುತ್ತಾರೆ.
ಕಾನೂನು ದುರುಪಯೊಗ ಮಾಡಿಕೊಳ್ಳುತ್ತಾರೆ. ತಮ್ಮ ಕೊಠಡಿಯಲ್ಲಿ ಒಂದೇ ಖುರ್ಚಿ ಹಾಕಿ ಉಳಿದವರಿಗೆ ಅವಮಾನ ಮಾಡುತ್ತಾರೆ ಎಂದು ವಕೀಲರು ಆರೋಪಿಸುತ್ತಾರೆ.
ಕೆಲ ಕಾಲ ಮಾತಿನ ಚಕಮಕಿ
ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಸಿಪಿಐರನ್ನು ಅಮಾನತು ಮಾಡಬೇಕು. ಅವರು ಅವಾಚ್ಯ
ಶಬ್ಧಗಳಿಂದ ನಿಂದಿಸುತ್ತಾರೆ ಎಂದು ವಕೀಲರು ಹೇಳಿದ ಸಂದರ್ಭದಲ್ಲಿ, ಪಪಂ ಸದಸ್ಯ ರವಿ, ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡುವ ಮೊದಲು ನಿಮ್ಮಲ್ಲಿ ದಾಖಲೆಗಳಿವೆಯಾ ಎಂದು ಪ್ರಶ್ನಿಸುತ್ತಿದ್ದರು. ಆಗ
ರೊಚ್ಚಿಗೆದ್ದ ವಕೀಲರು ಠಾಣೆಯಲ್ಲಿ ಸಿಸಿಟಿವಿ ಫುಟೇಜ್ ಇದೆ ಪರಿಶೀಲಿಸಲಿ ಎಂದು ಒಗ್ಗಟ್ಟಿನಿಂದ ಮುಂದೆ ಬಂದರು. ಪರಿಣಾಮ ಪೊಲೀಸ್ ಮತ್ತು ವಕೀಲರ ಮಧ್ಯೆ ಕೆಲ ಕ್ಷಣ ಸಂಘರ್ಷ ಏರ್ಪಟ್ಟಿತ್ತು.
ತಾ.ವಕೀಲರ ಸಂಘದ ಅಧ್ಯಕ್ಷ ಓಂಕಾರೇಶ್ವರ್ ಮಾತನಾಡಿ, ಸಾರ್ವಜನಿಕ ಸೊತ್ತಾದ ಠಾಣೆಯಲ್ಲಿ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳಬಾರದು. ದೂರು ಕೊಡಲು ಬಂದವರನ್ನು ಗೌರವದಿಂದ ನಡೆಸಿಕೊಳ್ಳುವುದು ಠಾಣಾಧಿಕಾರಿಗಳ ಕರ್ತವ್ಯ. ಆದರೆ ಪಿಐ ಶ್ರೀನಿವಾಸ್ ರಾವ್ ವಕೀಲರಿಗೆ ಅಗೌರವ ತೋರಿದ್ದಾರೆ. ಠಾಣೆಗೆ ಬಂದವರನ್ನು ಮರ್ಯಾದೆಯಿಂದ ನಡೆಸಿಕೊಳ್ಳುವುದಿಲ್ಲ ಎಂದು ಹೇಳಿದರು.
ವಿಚಾರಣೆ ಮಾಡಿದ ಮೇಲೆ ಕ್ರಮ
ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದ ಎಸ್ಪಿ ಉಮಾಪ್ರಶಾಂತ್, ನಿಮ್ಮ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಕರ್ತವ್ಯ ಲೋಪದ ವಿರುದ್ಧ ಲೋಕಸ್ಪಂದನಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ವಕೀಲರು ಮತ್ತು ಪೊಲೀಸರು ಸಮಾಜದ ಎರಡು ಕಣ್ಣುಗಳಿದ್ದಂತೆ. ನಿಮ್ಮ ಸಲಹೆಗಳನ್ನು ಇಲಾಖೆ ಪ್ರಾಮಾಣಿಕವಾಗಿ ಸ್ವೀಕರಿಸುತ್ತದೆ. ಉತ್ತಮ ಸಮಾಜ ಕಟ್ಟಬೇಕಾದರೆ ವಕೀಲರು ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಸಹಕಾರ ಅತ್ಯಗತ್ಯ ಎಂದರು.
ಟ್ರ್ಯಾಫಿಕ್ ಸಮಸ್ಯೆ, ಸಿಗ್ನಲ್ ಅಳವಡಿಕೆ, ಕಾಲೇಜು ರಸ್ತೆಗಳಲ್ಲಿ ಕರ್ಕಶ ಶಬ್ಧ ಸಂಚಾರ, ಮಹಿಳೆಯರ ರಕ್ಷಣೆ, ವಿದ್ಯಾರ್ಥಿಗಳಿಗೆ ಭದ್ರತೆ, ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರಿಂದ ಆಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಮ್ಮ ಗಂಭೀರ ಸಲಹೆ ಮತ್ತು ದೂರುಗಳನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಎಸ್.ಬಸವರಾಜ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಎಸ್.ಕೆ.ರಾಮರೆಡ್ಡಿ, ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ರಾವ್, ಪಿಎಸ್ಐ ಡಿ.ಎಸ್.ಸಾಗರ್ ಸೇರಿದಂತೆ ಅನೇಕ ಸಂಘಟನೆಗಳ ಪದಾಧಿಕಾರಿಗಳು, ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
…….