ದಾವಣಗೆರೆ : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಂಸದ ಸಿದ್ದೇಶ್ವರ ವಿರುದ್ದ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಸೋತ ಮೇಲೆ ಸುಮ್ಮನಿರಬೇಕು. ಬರುವ ಚುನಾವಣೆ ತನಕ ಕಾಯಬೇಕು. ಅದು ಬಿಟ್ಟು ಹಿರಿಯರ ಬಗ್ಗೆ ಮಾತನಾಡಿದರೆ ಎಷ್ಟು ಸರಿ?ಹೀಗೆ ಟೀಕೆ ಮಾಡಿದರೆ ಅವರಿಗೆ ಎಷ್ಟು ಸೊಕ್ಕು ಇರಬೇಕು ಎಂದು ಮಾಜಿ ಸಂಸದ ಸಿದ್ದೇಶ್ವರ ವಿರುದ್ದ ಶಾಸಕ ಶಾಮನೂರು ಹರಿಹಾಯ್ದರು.
ಸೋತಿರುವ ಬಿಜೆಪಿ ಗಂಡ ಅಭ್ಯರ್ಥಿ ನನ್ನ ಅಳಿಯ. ಅವನು ನಿಮಿಷ ನಿಮಿಷಕ್ಕೂ ಅಳುತ್ತಿದ್ದಾನೆ. ಯಾಕೆ ಅವನು ಅಳುತ್ತಿದ್ದಾನೆ ಗೊತ್ತಿಲ್ಲ.ಅಷ್ಟೇ ಅಲ್ಲದೇ ಅವನು ಭೀಮಸಮುದ್ರದಿಂದ ಏನು ತಂಗೊಂಡು ಬಂದಿದ್ದ ಎಂದು ಕೇಳಬೇಕೆಂದಿದ್ದೇ ಆದರೆ ಬಂದಿಲ್ಲ ಎಂದರು.
ಸಿದ್ದೇಶ್ ಸೋತ ಮೇಲೆ ಒಪ್ಪಿಕೊಂಡು ಆರಾಮವಾಗಿ ಮನೆಯಲ್ಲಿ ಇರಬೇಕು.ಅದನ್ನು ಬಿಟ್ಟು ನನ್ನನ್ನು ಲೀಡರ್ ಸೋಲಿಸಿದ್ರು ಅನ್ನೋದು ಸರಿಯಲ್ಲ. ಅವರು ಬಂದಿದ್ರೆ ಮಾತನಾಡುತ್ತಿದ್ದೇ. ಅವರು ಇಲ್ಲದಿರುವ ಹೊತ್ತಿನಲ್ಲಿ ಮಾತನಾಡುವುದು ಸರಿಯಲ್ಲ ಅಂತ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಕೇವಲ ಅಡುಗೆ ಮಾಡಲಷ್ಟೇ ಲಾಯಕ್ಕು ಅಂದಿದ್ದ ಶಾಮನೂರು
ಈ ಹಿಂದೆ ಚುನಾವಣೆ ಸಮಯದಲ್ಲಿ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕೇವಲ ಅಡುಗೆ ಮಾಡಲಷ್ಟೇ ಲಾಯಕ್ಕು’ ಎಂದು ಹೇಳುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿವಾದ ಸೃಷ್ಟಿಸಿದ್ದರು. ದಾವಣಗೆರೆ ಜಿಲ್ಲೆಯ ಬಂಟ್ಸ್ ಭವನದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡಲು ಸಹ ಬರುವುದಿಲ್ಲ. ಅವರು ಕೇವಲ ಅಡುಗೆ ಮಾಡಲು ಮಾತ್ರ ಲಾಯಕ್ಕು. ಲೋಕಸಭೆ ಚುನಾವಣೆಯಲ್ಲಿ ಜನಬೆಂಬಲ ಪಡೆಯುವ ಮುನ್ನ ಅವರು ದಾವಣಗೆರೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದಿದ್ದರು.
ಮುಂದುವರಿದು, ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ಕಮಲದ ಹೂವು ಅರ್ಪಿಸುತ್ತೇನೆ ಎನ್ನುತ್ತಿದ್ದಾರೆ. ಈ ಹಿಂದೆಯೂ ಗೆದ್ದಿದ್ದು ನೀವೆ (ಜಿಎಂ ಸಿದ್ದೇಶ್ವರ) ಅಲ್ಲವೇ? ಆಗ ಹೂವನ್ನು ಕಳುಹಿಸಿದ್ರಾ?. ಮೋದಿಗೆ ಹೂವನ್ನು ಕಳುಹಿಸಿದರೆ ಅಭಿವೃದ್ಧಿ ಆಗುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಕೇವಲ ಮೋದಿ ಮೋದಿ ಎನ್ನುವುದರಿಂದ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದರು.