ದಾವಣಗೆರೆ : ಬೆಂಗಳೂರು ಕೇಂದ್ರ… ಬಿಜೆಪಿಯ ಭದ್ರಕೋಟೆ ಅಂತ್ಲೆ ಬಿಂಬಿತವಾಗಿದೆ. ಆದ್ರೆ ಇಲ್ಲಿನ ಜನರ ಮನಸ್ಥಿತಿ ಮಾತ್ರ ತುಂಬಾ ವಿಭಿನ್ನವಾಗಿದೆ.. ಯಾರೇ ಗೆದ್ರೂ, ಯಾರೇ ಸೋತ್ರೂ ನಮ್ಗೇನೂ ಲಾಭ ಇಲ್ಲ ಅನ್ನೋ ಭಾವನೆಯಲ್ಲಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಸತತ 4ನೇ ಸಲ ಗೆದ್ದು ಬೀಗೋಕೆ ಮುಂದಾಗಿದ್ದಾರೆ. ಇದ್ರ ಮಧ್ಯೆಯೂ ಕಾಂಗ್ರೆಸ್​​ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಚೊಚ್ಚಲ ಗೆಲುವನ್ನ ದಾಖಲಿಸಿ, BJPಗೆ ಬಿಗ್ ಶಾಕ್ ಕೊಡೋಕೆ ಯತ್ನಿಸುತ್ತಿದ್ದಾರೆ. ಹಾಗಾದ್ರೆ ಬೆಂಗಳೂರು ಕೇಂದ್ರದಲ್ಲಿ ವಿಜಯಲಕ್ಷ್ಮಿ ಚಂಚಲತೆಯನ್ನ ತೋರಿಸುತ್ತಿರೋದ್ಯಾಕೆ ಗೊತ್ತಾ.?

ಗೆಲುವು.. ಚುನಾವಣೆಯಲ್ಲಿ ಎಲ್ಲರ ಕಣ್ಣು ಗೆಲುವಿನ ಮೇಲೇನೇ ಇರುತ್ತೆ.. ಜನ ಏನ್ ಅಂದ್ಕೊಂತಿದ್ದಾರೆ. ಶ್ರೀಸಾಮಾನ್ಯರಿಗೆ ಏನ್ ಬೇಕು ಅಂತ ಯಾರೂ ಅರ್ಥ ಮಾಡ್ಕೊಂತಿಲ್ಲ. ಇದೊಂದು ಸಲ ಗೆದ್ರೆ ಸಾಕು.. ಮುಂದಿನ ಐದು ವರ್ಷ ಹಾಯಾಗಿರ್ಬಹುದು ಅಂತ ಭಾವಿಸುವವರೇ ಹೆಚ್ಚು ಅಂತವರ ಮಧ್ಯೆ ಕೆಲವರು ನಿಜವಾಗ್ಲೂ ಜನ ನಾಯಕರಾಗಿ, ಜನರ ಕಷ್ಟ ನಷ್ಟಗಳಿಗೆ.. ಕಷ್ಟ ಕಾರ್ಪಣ್ಯಗಳಿಗೆ ಶ್ರಮಿಸೋವಂಥಾ ಗುಣವನ್ನ ಬೆಳೆಸಿಕೊಳ್ತಾಯಿದ್ದಾರೆ.. ಅಂತವರಲ್ಲಿ ಒಬ್ರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್.. ಇವರು ಸುಮಾರು ವರ್ಷಗಳಿಂದ ತಮ್ಮ ಕ್ಷೇತ್ರದ ಜನರ ಕಷ್ಟ ನಷ್ಟಕ್ಕೆ ಕರಗುತ್ತಿದ್ದಾರೆ. ಆದ್ರೆ ಜನರ ಸೇವೆ ಮಾಡಲು ಸಾಮಾನ್ಯರಲ್ಲಿ ಸಾಮಾನ್ಯರಾಗಿರೋದಕ್ಕಿಂತ ಹೆಚ್ಚಾಗಿ ಜನ ನಾಯಕರಾದ್ರೆ ಇನ್ನು ಹೆಚ್ಚು ಶಕ್ತಿ ಬರುತ್ತೆ. ಹೀಗಾಗಿ ಮನ್ಸೂರ್ ಅಲಿ ಖಾನ್ ಕಾಂಗ್ರೆಸ್​​ನಿಂದ ಟಿಕೆಟ್ ಗಿಟ್ಟಿಸಿ ಅಖಾಡಕ್ಕಿಳಿಸಿದ್ದಾರೆ. ತಮ್ಮನ್ನ ಗೆಲ್ಲಿಸುವಂತೆ ದಿನಾ ಬೆಳಗ್ಗೆ 7 ಗಂಟೆಯಿಂದ ರಾತ್ರಿ ಮಲಗೋವರೆಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಳಗ್ಗೆ 7ಗಂಟೆಗೆ ವಾಕಿಂಗ್ ಬರೋರ ಜೊತೆ ಮಾತುಕತೆ ನಡೆಸುತ್ತಾ, ಅವರ ಕಷ್ಟ ನಷ್ಟಗಳಿಗೆ ಕಿವಿಯಾಗುತ್ತಾ ವ್ಯವಹರಿಸುತ್ತಿದ್ಧಾರೆ.

ಆನಂತರ ತೆರೆದ ವಾಹನದಲ್ಲಿ ಸ್ಥಳೀಯ ಮುಖಂಡರ ಜೊತೆಗೆ ಪ್ರಚಾರ ನಡೆಸುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಹೀಗೆ ಆರಂಭಗೊಂಡ ಪ್ರಚಾರ ರಾತ್ರಿ 10 ಗಂಟೆಯವರೆಗೂ ನಡೆಯುತ್ತದೆ. ಸಂಜೆ ಕಾಲ್ನಡಿಗೆಯಲ್ಲಿ ತೆರಳಿ ಮತ್ತೆ ಮತಯಾಚನೆ ಮಾಡುತ್ತಿದ್ದಾರೆ. ನಾನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವನು ಹಾಗೂ ಜಾತ್ಯತೀತ ಮನೋಭಾವ ಹೊಂದಿದವನು. ಹಾಗಾಗಿ ಎಲ್ಲಾ ವರ್ಗದ ಜನ ನನ್ನನ್ನು ಒಪ್ಪುತ್ತಾರೆ ಅನ್ನೋ ವಿಶ್ವಾಸ ಮನ್ಸೂರ್ ಅಲಿ ಖಾನ್ ಅವರಿಗಿದೆ.

ನಿಮಗೆ ಗೊತ್ತಿರ್ಲಿ, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎನ್ನಲಾಗುತ್ತಿರೋ ಕ್ಷೇತ್ರವಾಗಿದೆ. ಕಾರಣ ಇಲ್ಲಿ ಕಳೆದ ಮೂರು ಅವಧಿಯಲ್ಲಿ ಸತತವಾಗಿ ಬಿಜೆಪಿಯ ಪಿಸಿ ಮೋಹನ್ ಗೆಲುವು ಸಾಧಿಸಿದ್ದಾರೆ. ತಮಿಳು ಭಾಷಿಗರು, ಮುಸ್ಲಿಮರು, ದಲಿತರು ಹಾಗೂ ಕ್ರೈಸ್ತ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಪಿಸಿ ಮೋಹನ್ ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪಿಸಿ ಮೋಹನ್ ಏನೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ಮೂರು ಅವಧಿಯ ಅನುಭವವೇ ಅವರಿಗೆ ಶ್ರೀರಕ್ಷೆ ಅನ್ನೋದು ಅವರ ವಿಶ್ವಾಸವಾಗಿದೆ. ಇನ್ನ ಈ ಕ್ಷೇತ್ರದ ಬಗ್ಗೆ ಹೇಳೋದಾದ್ರೆ.., ಬೆಂಗಳೂರು ಕೇಂದ್ರ ನಿಜಕ್ಕೂ ಒಂದು ಮಿನಿ ಇಂಡ್ಯಾ ಅಂದ್ರೆ ತಪ್ಪಾಗಲಾರ್ದು. ಇಲ್ಲಿ ಒಟ್ಟು ಹತ್ರತ್ರ 24 ಲಕ್ಷ ಮತದಾರರಿದ್ದಾರೆ. ಜೊತೆಗೆ ಅಹಿಂದ ಭದ್ರಕೋಟೆ ಎಂದು ಬಿಂಬಿತವಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ಪಿಸಿ ಮೋಹನ್ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುತ್ತಿದ್ದಾರೆ ಅನ್ನೋದು ನಿಜಕ್ಕೂ ವಿಶೇಷ. ಕ್ಷೇತ್ರದಲ್ಲಿ ಮುಸ್ಲಿಂ 6 ಲಕ್ಷ , ಕ್ರಿಸ್ಚಿಯನ್ 2 ಲಕ್ಷ, ದಲಿತರು 4 ಲಕ್ಷ ಹಾಗೂ ಬಲಿಜಿಗ, ಗೊಲ್ಲ, ಕುರುಬ, ತಿಗಳ, ಮಡಿವಾಳ, ಕಮ್ಮ ಹಾಗೂ ಇತರ ಹಿಂದುಳಿದ ವರ್ಗಗಳು- 6 ಲಕ್ಷ ಮತದಾರರಿದ್ದಾರೆ.

ಇನ್ನ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಪೈಕಿ 5ರಲ್ಲಿ ಕಾಂಗ್ರೆಸ್ ಹಾಗೂ 3ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಈ ಸಲ ಗೆದ್ದೇ ಗೆಲ್ಲಬೇಕು ಅನ್ನೋ ಹಠ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್​ ಅವರಿಗಿದ್ರೆ, ಮತ್ತೊಂದು ಕಡೆ ಪಿಸಿ ಮೋಹನ್ 4ನೇ ಸಲ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆದ್ರೆ ಮತದಾರ ವಿಜಯದ ಮಾಲೆಯನ್ನ ಯಾರ ಕೊರಳಿಗೆ ಹಾಕ್ತಾನೆ ಅನ್ನೋದೇ ಸದ್ಯದ ಕುತೂಹಲ.

Share.
Leave A Reply

Exit mobile version