ಒಂದಾನೊಂದು ಕಾಲದಲ್ಲಿ ಶ್ರಮಿಕ ಹತ್ತು ರೂ.ಪ್ಯಾಕೇಟ್ ಸಾರಾಯಿ ಕುಡಿದು ಒಂದಿಷ್ಟು ಮನೆಗೆ ಕೊಟ್ಟು ಭೂ ತಾಯಿಯ ಮಡಿಲಿನಲ್ಲಿ ಆರಾಮವಾಗಿ ಮಲಗುತ್ತಿದ್ದ..ಇದಾದ ನಂತರ ಸಾರಾಯಿ ಬಂದ್ ಆಯಿತು. ಹೊಸ ಹೊಸ ಮದ್ಯದ ಫ್ಯಾಕ್ಟರಿಗಳು ಹುಟ್ಟಿಕೊಂಡವು. ದರವನ್ನು ಹೆಚ್ಚು ಮಾಡಿದವು. ಆದರೆ ಶ್ರಮಿಕನ ದುಡಿಮೆ ಹೆಚ್ಚಾಗಲಿಲ್ಲ…ಅವನು ಹೆಚ್ಚು ಹಣ ಕೊಟ್ಟು ಮದ್ಯ ಸೇವನೆ ಮಾಡಬೇಕಾಯಿತು.. ಬರ ಬರುತಾ ಇದರಿಂದ ಸರಕಾರಕ್ಕೂ ಆಧಾಯ ಹೆಚ್ಚಿತು..ಅಬಕಾರಿ ಅಧಿಕಾರಿಗಳೂ ಕೂಡ ಅಕ್ರಮಕ್ಕೆ ಸಾಥ್ ನೀಡಿದರು..ಇದಕ್ಕೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವುದೇ ಸಾಕ್ಷಿ….ಹೀಗಾದರೂ ದಾವಣಗೆರೆ ಅಬಕಾರಿ ಇಲಾಖಾಧಿಕಾರಿಗಳು ಬಾರ್ ಮಾಲೀಕರ ಅಕ್ರಮ ಆಟಕ್ಕೆ ಸಾಥ್ ನೀಡಿದ್ದಾರೆ…ಇದನ್ನು ತಡೆಗಟ್ಟುವುದು ದಾವಣಗೆರೆ ವಿಜಯದ ಆಶಯವಷ್ಟೇ….ಇದನ್ನು ಸಂಪೂರ್ಣ ತಡೆಗಟ್ಟಲು ಆಗದೇ ಇದ್ದರೂ, ಜನರ ಮುಂದೆ ಅಲ್ಲಿನ ಚಿತ್ರಣವನ್ನು ದಾಖಲೆ ಸಮೇತ ನಿಮ್ಮ ಮುಂದೆ ಇಡುತ್ತಿದ್ದೇವೆ….ಹಾಗಾದ್ರೆ ಈ  ಸ್ಟೋರಿ ನೋಡಿ.

……….

.ನಂದೀಶ್ ಭದ್ರಾವತಿ, ದಾವಣಗೆರೆ

ಯಾವುದೇ ಅಂಗಡಿಯಲ್ಲಿ ಯಾವುದೇ ಪದಾರ್ಥ ಕೊಂಡರೂ ಬಿಲ್ ಕೊಡಬೇಕು ಎಂಬ ನಿಯಮವಿದೆ. ಅದರಂತೆ ಕೆಲ ಅಂಗಡಿ ಮಾಲೀಕರು ಬಿಲ್ ಕೊಟ್ಟು ಸರಕಾರಕ್ಕೆ ಆದಾಯ ತರುತ್ತಿದ್ದಾರೆ. ಆದರೆ ನೀವೇನಾದರೂ ಎಣ್ಣೆ ಅಂಗಡಿಗೆ ಹೋಗಿ ಎಣ್ಣೆ ತಂಗೊಂಡ್ರೆ ಬಿಲ್ ಕೊಡೋದಿಲ್ಲ. 

ಸರಕಾರಕ್ಕೆ ಆದಾಯ ತಂದುಕೊಡುವ ಅಬಕಾರಿ ಇಲಾಖೆ ತನ್ನ ವ್ಯಾಪ್ತಿಯ ಬಾರ್‌ಗಳಲ್ಲಿ ಬಿಲ್ ಕೊಡದೇ ಮದ್ಯ ಮಾರಾಟ ಮಾಡುತ್ತಿದ್ದರೂ, ವೌನವಹಿಸಿರುವುದು ನಾನಾ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಅಬಕಾರಿ ಡಿಸಿ ಸ್ವಪ್ನ  ಏಕೆ ವೌನವಹಿಸಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಪ್ರಶ್ನೆ ಎದ್ದಿದೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಅನೇಕ ಮದ್ಯದ ಅಂಗಡಿಗಳಿದ್ದು, ಯಾವ ಬಾರ್‌ಗಳಲ್ಲಿಯೂ ಬಿಲ್ ಕೊಡುತ್ತಿಲ್ಲ. ಬದಲಾಗಿ ಬಿಳಿ ಹಾಳೆ ಮೇಲೆ ಮದ್ಯದ ಬಿಲ್‌ನ್ನು ಕೊಡುತ್ತಿದ್ದಾರೆ. 

ಬಿಲ್ ಕೇಳಿದರೆ, ಮಷಿನ್ ಕೆಟ್ಟಿದೆ. ಪ್ರಿಂಟ್‌ಬರೋದಿಲ್ಲ. ನಮ್ಮ ಬಳಿ ಬಿಲ್ ಕೊಡೋದಿಲ್ಲ ಎಂದು ಬಾರ್ ಮಾಲೀಕರು ಹೇಳುತ್ತಿದ್ದಾರೆ. ಈ ವಿಚಾರ ಸ್ಥಳೀಯ ಅಬಕಾರಿ ಇನ್ಸೆಪೆಕ್ಟರ್‌ಗೆ ಗೊತ್ತಿದ್ದು, ಗೊತ್ತಿಲ್ಲಂದತೆ ಇದ್ದಾರೆ.  ಇನ್ನು ಅಬಕಾರಿ ಡಿಸಿ ಕೂಡ ವಿಷಯವೇ ಗೊತ್ತಿಲ್ಲದಂತೆ ಇರುವುದು ಯಾಕೆ ಎಂದು ಜನ ಚರ್ಚಿಸುತ್ತಿದ್ದಾರೆ.

ಅಧಿಕಾರಿಗಳ ಮೇಲೆ ಅನುಮಾನ,

ಮದ್ಯಪ್ರಿಯರು ಮದ್ಯಕೊಂಡ ಮೇಲೆ ಅಂಗಡಿ ಹೆಸರು ಇರುವ ಜಬಿಲ್ ಕೊಡಬೇಕು, ಅಲ್ಲದೇ ಯಾವ ಮದ್ಯಕ್ಕೆ ಎಷ್ಟು ದರವೆಂದು ಬಿಲ್‌ನಲ್ಲಿ ನಮೂದಿಸಬೇಕು. ಅಬಕಾರಿ ಅಧಿಕಾರಿಗಳು ಕಾಲಕಾಲಕ್ಕೆ ತಕ್ಕಂತೆ ಇದನ್ನು ಪರಿಶೀಲಿಸಬೇಕು. ಆದರೆ ಅಬಕಾರಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಇದು ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

ಎಂಆರ್ ಪಿ ಯಲ್ಲಿಯೂ ದರ ಹೆಚ್ಚು : ಮದ್ಯಪ್ರಿಯರಿಯರಿಗೆ ಬಾರ್ ಮಾಲೀಕರು ಮಹಾ ಮೋಸ ಮಾಡಿ ವಸೂಲಿಗಿಳಿದಿದ್ದು, ಸಾಕಷ್ಟು ಹಣ ಗಳಿಸುತ್ತಿದ್ದಾರೆ. ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ಬಾರ್‌ಗಳಲ್ಲಿ ಇದೇ ಪರಿಸ್ಥಿತಿ ಇದ್ದು,  ಎಂಆರ್‌ಪಿ ದರದ ಮೇಲೆ ಶೇ.30ರಷ್ಟು ಒಂದು ಬಾಟಲ್‌ಗೆ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿ ಮದ್ಯಪ್ರಿಯರಿಗೆ ಮಹಾ ಮೋಸ ಮಾಡುತ್ತಿದ್ದಾರೆ. ಈ ನಡುವೆ ಎಂಎಸ್ಐಎಲ್ ಮದ್ಯದ ಅಂಗಡಿಯಲ್ಲಿ ಒಂದು ಬಾಟಲಿಗೆ ಐದರಿಂದ ಹತ್ತು ರೂ. ದರ ಹೆಚ್ಚಿಸುತ್ತಿದ್ದಾರೆ.

ಅಬಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ?

ಹೆಚ್ಚಿನ ದರಕ್ಕೆ ಮದ್ಯಮಾರಾಟದ ಹಿಂದೆ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೂಡ ಇದ್ದು, ಬಾರ್‌ಅಂಡ್ ರೆಸ್ಟೊರೆಂಟ್‌ನಲ್ಲಿ ಬಿಲ್ ಕೇಳಿದ್ರೆ ಮದ್ಯನೆ ಕೊಡಲ್ಲ ಎಂಬ ಆರೋಪ ಕೂಡ ಇದೆ. ಅದು ಅಲ್ಲದೇ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಅಬಕಾರಿ ಡಿಸಿ ಮನಸ್ಸು ಮಾಡುತ್ತಿಲ್ಲ. ಇದು ಅಧಿಕಾರಿಗಳ ಜಾಣ ಕುರುಡುತನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಇಂತಹ ಅಕ್ರಮಕ್ಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ಅಲ್ಲದೇ ಕುಡುಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರ್ ಮಾಲೀಕರಿಂದ ಅಬಕಾರಿ ಇಲಾಖೆಗೆ ಕಮಿಷನ್ ಹೋಗ್ತಿದ್ಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಹೆಚ್ಚುವರಿ ಹಣ, ಅಧಿಕ ಲಾಭ

ಸಿಎಲ್ 2 ಬಾರ್‌ಗಳಲ್ಲಿ ಡೇ ಅಂಡ್ ನೈಟ್ ಎಂ.ಆರ್.ಪಿ ದರಕ್ಕಿಂತ 30 ರಿಂದ 40 ರೂಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಸಿಎಲ್2 ಬಾರ್‌ಗಳಲ್ಲಿ ಎಂ.ಆರ್.ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನೂ ಇದೆ. ಆದ್ರೆ ಅದಕ್ಕೆ ಯಾರೂ ಕೂಡ ಕ್ಯಾರೆ ಅಂತಿಲ್ಲ. ಯಾವೊಂದು ನಿಯಮವನ್ನು ಬಾರ್ ಮಾಲೀಕರು ಪಾಲಿಸುತ್ತಿಲ್ಲ. ಅಬಕಾರಿ ಅಧಿಕಾರಿಗಳಿಗೆ ಬಾರ್ ಮಾಲೀಕರು ಕಮಿಷನ್ ಕೊಟ್ಟು ಎಲ್ಲಾ ಅಡ್ಜೆಸ್ಮೆಂಟ್ ಮಾಡಿಕೊಂಡು ದರ್ಬಾರ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಬಾರ್‌ಗಳಲ್ಲಿ ಕೌಂಟರ್‌ನಲ್ಲಿ ಕುಡಿಯೋಕೋ ಅವಕಾಶ ಕೊಡ್ತಾರೆ. ಯಾವುದೇ ಬಿಲ್ ಕೊಡಲ್ಲ, ದರಪಟ್ಟಿ, ಸ್ವಚ್ಛತೆ ಅಂತೂ ಇಲ್ವೇ ಇಲ್ಲ. ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎಂಬ ಆರೋಪವೂ ಇದೆ.  ಇತ್ತ ಬಾರ್ ಮಾಲೀಕರ ಜೊತೆ ಸೇರಿ ಅಧಿಕಾರಿಗಳು ಸಿಕ್ಕಿದ್ದೇ ಚಾನ್ಸ್ ಅಂತಾ ಸಿಕ್ಕಾಪಟ್ಟೆ ಲೂಟಿ ಮಾಡುತ್ತಿದ್ದಾರೆ. ಇನ್ನು ಮನಸ್ಸಿಗೆ ಬಂದಂತೆ ಮದ್ಯ ಮಾರುತ್ತಿದ್ರೂ ಹೇಳೋರು ಕೇಳೋರು ಯಾರು ಇಲ್ಲ ಎಂದು ಬುದ್ದಿಜೀವಿಗಳು ಅಸಮಾಧಾನ ಹೊರ ಹಾಕಿದ್ದಾರೆ. 

ಅಧಿಕಾರಿಗಳಿಂದ ಬರೋದು ಎರಡೇ ಉತ್ತರ

ಬಾರ್ ಮಾಲೀಕರು ಬಿಲ್ ಕೊಡುತ್ತಿಲ್ಲ ಕ್ರಮ ಕೈಗೊಳ್ಳಿ ಅಂತ ಅಧಿಕಾರಿಗಳಿಗೆ ಕೇಳಿದ್ರೆ, ಎಲ್ಲ ಲೈಸೇನ್ಸಿಗಳಿಗೆ ಬಿಲ್ ಕೊಡೋದಕ್ಕೆ ಹೇಳಿದ್ದೇವೆ, ಕೊಡುತ್ತಿದ್ದಾರೆ..ಯಾವ ಬಾರ್ ಕೊಡುತ್ತಿಲ್ಲ ಅಂತ ಹೇಳಿ ಪರಿಶೀಲಿಸುತ್ತೇವೆ ಎನ್ನುತ್ತಾರೆ..ಅಲ್ಲದೇ ರೈಟಿಂಗ್ ನಲ್ಲಿ ದೂರು ಕೊಡಬೇಕಂತೆ..ಹಾಗಾದ್ರೆ ಇವರು ಇರೋದಾದ್ರು ಏಕೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಒಟ್ಟಾರೆ ಅಬಕಾರಿ ನಿಯಮದ ಪ್ರಕಾರ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಯನ್ನು ಗ್ರಾಹಕರಿಂದ ಪಡೆಯಬಾರದು. ಇಂತಹ ಸನ್ನಿವೇಶ ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿರುವುದು ಅಬಕಾರಿ ಇಲಾಖೆ ಅಧಿಕಾರಿಗಳ ಕೆಲಸ. ಆದರೆ ಈ ಎಚ್ಚರಿಕೆಯನ್ನು ಕೇರ್ ಮಾಡದ ಬಾರ್ ಮಾಲೀಕರು, ಸಿಕ್ಕಿದ್ದೇ ಚಾನ್ಸ್ ಎಂದು ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಇನ್ನಾದ್ರೂ ಅಬಕಾರಿ ಡಿಸಿ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುತ್ತಾರಾ ಅಥವಾ ಬಾರ್ ಮಾಲೀಕರ ಅಕ್ರಮಕ್ಕೆ ಸಾಥ್ ನೀಡುತ್ತಾರಾ ಎಂದು ಕಾದು ನೋಡಬೇಕಿದೆ?.

Share.
Leave A Reply

Exit mobile version