ನಂದೀಶ್ ಭದ್ರಾವತಿ, ದಾವಣಗೆರೆ

ರಾಜಕೀಯದಲ್ಲಿ ಶತ್ರು ಮಿತ್ರನಾಗಬಹುದು, ಮಿತ್ರ ಶತ್ರುನಾಗಬಹುದು. ಈ ಗಾದೆಯಂತೆ ಇಂದು ಕಾಂಗ್ರೆಸ್ ನಿಂದ ಒಂದು ವಿಕೆಟ್ ಪತನವಾದರೆ ಬಿಜೆಪಿಯಿಂದ ಇನ್ನೊಂದು ಬಿಗ್ ವಿಕೆಟ್ ಪತನವಾಗಲಿದೆ.

ದಾವಣಗೆರೆ ಅಂದ್ರೆ ಸಾಕು ಅದು ಬೀಗರ ನಡುವೆ ನಡೆಯುವ ನೇರ ಕದನ. ಶಾಮನೂರು ಹಾಗೂ ಜಿಎಂ ಸಿದ್ದೇಶ್ವರ ಮಾವ ಅಳಿಯರಾಗಿದ್ದು, ಇವರ ನಡುವೆ ಸುಮಾರು ವರ್ಷಗಳಿಂದ ಜಿದ್ದಾಜಿದ್ದಿ ನಡೆಯುತ್ತಲೇ ಇರುತ್ತದೆ. ಇಬ್ಬರು ಕೂಡ ವ್ಯಾಪಾರಸ್ಥರು, ಇಬ್ಬರು ಕೂಡ ಕೋಟ್ಯಾಧಿಪತಿಗಳು. ಹಾಗಾಗಿ ರಾಜಕೀಯ ಕದನ ಆಗಾಗ ನಡೆಯುತ್ತಲೇ ಇರುತ್ತದೆ. ರಾತ್ರಿ ಬಿಜೆಪಿಯವರ ಜತೆ ಇದ್ದವರು ಬೆಳಾಗಗುತ್ತಲೇ ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್ ಜತೆ ಇದ್ದವರು ಬಿಜೆಪಿಗೆ ಸೇರುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಕಾಂಗ್ರೆಸ್ ನ ನಾಯಕ, ಮಲ್ಲಿಕಶರ್ಜುನ್ ಆಪ್ತ ಶಿವನಹಳ್ಳಿ ರಮೇಶ್ ಬಿಜೆಪಿಗೆ ಸೇರಿದರೆ, ಪಕ್ಕಾ ಕಾಂಗ್ರೆಸ್ ವಿರೋಧಿ, ಹಿಂದುತ್ವವಾದಿ ಮಲೆಬೆನ್ನೂರಿನ ವಾಗೀಶ್ ಸ್ವಾಮಿ ಕಾಂಗ್ರೆಸ್ ಗೆ ಸೇರಲಿದ್ದಾರೆ.

ವಾಗೀಶ್ ಸ್ವಾಮಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನಾಗಿದ್ದು, ಕಾಂಗ್ರೆಸ್ ಗೆ ಯಾವಾಗಲೂ ಠಕ್ಕರ್ ಕೊಡುತ್ತಿದ್ದರು. ಪಕ್ಕ ಹಿಂದುತ್ವವಾದಿ, ಆರ್ ಎಸ್ ಎಸ್ ಭಕ್ತ. ಅಲ್ಲದೇ ಮಾಯಕೊಂಡದಲ್ಲಿ ಬೇಡ ಜಂಗಮದ ಎಸ್ಟಿ ಮೀಸಲಾತಿಯಡಿಯಲ್ಲಿ ಕಾಂಗ್ರೆಸ್ ಗೆ ಭಾರೀ ಪೈಪೋಟಿ ಕೊಟ್ಟು ಸೋತಿದ್ದರು.

ವಿಧಾನಸಭೆ ಚುನಾವಣೆ ಸೋತ ಬಳಿಕ ಬಿಜೆಪಿ ಜತೆ ವಾಗೀಶ್ ಸ್ವಾಮಿ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ವಾಗೀಶ್ ಸ್ವಾಮಿ ಹುಟ್ಟು ಹಬ್ಬದ ದಿನ ಎಸ್.ಎಸ್.ಮಲ್ಲಿಕಾರ್ಜಿನ್, ಶಾಮನೂರು ಪೋಟೋ ಹಾಕಿ ಜಾಹೀರಾತು ನೀಡಲಾಗಿತ್ತು. ಆಗಲೇ ವಾಗೀಶ್ ಸ್ವಾಮಿ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ಇತ್ತು.

ಪಕ್ಕಾ ಹಿಂದೂ, ಆರ್ ಎಸ್ ಎಸ್ ಭಕ್ತ

ವಾಗೀಶ್ ಸ್ವಾಮಿ ಪಕ್ಕ ಹಿಂದೂ ಭಕ್ತರಾಗಿದ್ದು, ಹಣೆಯಲ್ಲಿ ತಿಲಕ, ಕತ್ತಿಗೆ ಕೇಸರಿ ಶಾಲು ಕಾಯಂ. ಮಲೆಬೆನ್ನೂರಿನಲ್ಲಿ ನಡೆಯುವ ಹಿಂದೂ ಹೋರಾಟಕ್ಕೆ ವಾಗೀಶ್ ಸ್ವಾಮಿಯೇ ನೇತೃತ್ವವಹಿಸಿಕೊಳ್ಳುತ್ತಿದ್ದರು. ಜಿಲ್ಲಾ ಪಂಚಾಯಿತಿಯಲ್ಲಿ ಸ್ವತಃ ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದರು. ಹೀಗಿರುವಾಗ ಕಾಂಗ್ರೆಸ್ ಗೆ ಯಾಕೆ ಸೇರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಎಸ್ಟಿ ಸಮುದಾಯದ ವಿರೋಧ ಕಟ್ಟಿಕೊಂಡಿದ್ದ ವಾಗೀಶ್ ಸ್ವಾಮಿ

ಬೇಡ ಜಂಗಮ ಪ್ರಮಾಣ ಪತ್ರ ಪಡೆದು ಮಾಯಕೊಂಡ ವಿಧಾನಸಭೆ ಮೀಸಲು ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದ ಬಿ.ಎಂ. ವಾಗೀಶ್ ಸ್ವಾಮಿ ಅವರು ಜಾತಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪರಿಶೀಲಿಸುವಂತೆ ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಸಂಚಾಲಕ ಚಿನ್ನಸಮುದ್ರ ಶೇಖರ್ ನಾಯ್ಕ ಈ ಹಿಂದೆ ಆಗ್ರಹಿಸಿದ್ದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಜಿ. ಪಂ ಚುನಾವಣೆಯಲ್ಲಿ ಜಂಗಮ ಎಂದು ನಮೂದಿಸಿ ಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. 2015 ರಿಂದ ಜಿಲ್ಲೆಯಲ್ಲಿ ಯಾವುದೇ ತಾಲ್ಲೂಕಿನ ತಹಶೀಲ್ದಾರರು ನೀಡಿಲ್ಲ ಎಂದು ಮಾಹಿತಿ ಹಕ್ಕಿನಡಿ ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಕೂಡ ಜಿಲ್ಲೆಯಲ್ಲಿ ಯಾರಿಗೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿಲ್ಲ ಎಂದು ಹೇಳಿದ್ದಾರೆ.

ವಾಗೀಶ್ ಅವರು ಎಸ್ಸಿ ಆಗಿದ್ದರೆ ಅಭ್ಯಂತರವಿಲ್ಲ. ಆದರೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಅಕ್ರಮವಾಗಿ ನಮ್ಮಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು.

ಅವರು ಎಲ್ಲಿಂದ ಪ್ರಮಾಣಪತ್ರ ಪಡೆದಿದ್ದಾರೆ ಎಂದು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪರಿಶೀಲಿಸಬೇಕೆಂದು ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಹೇಳಿದ್ದರು. ಒಟ್ಟಾರೆ ಎರಡು ಕಡೆಯಿಂದ ಒಂದೊಂದು ಪ್ರಮುಖ ‌ವಿಕೆಟ್ ಪತನವಾಗಿದ್ದು, ಯಾರು ಎಷ್ಟು ಮತಗಳನ್ನು ಹಾಕಿಸಿ ಗೆಲ್ಲಿಸುತ್ತಾರೆ ಎಂದು ಕಾದುನೋಡಬೇಕು.

Share.
Leave A Reply

Exit mobile version