
ದಾವಣಗೆರೆ
ಗ್ರಾಹಕರಿಂದ ಹೆಚ್ಚುವರಿ ಕಂತುಗಳನ್ನು ವಸೂಲಿ ಮಾಡಿದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗೆ ಗ್ರಾಹಕರ ಆಯೋಗ ಬಿಸಿ ಮುಟ್ಟಿಸಿದೆ.
ನಾಗನೂರು ಗ್ರಾಮದ ರೇಖಾ ಚಂದ್ರಶೇಖರಪ್ಪ 2019ರ ಫೆ.25ರಂದು ದಾವಣಗೆರೆಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಮನೆಯನ್ನು ಅಡಮಾನ ಮಾಡಿ 4.04 ಲಕ್ಷ ರೂ. ಸಾಲ ಪಡೆದಿದ್ದರು. ಅಸಲು ಮತ್ತು ಬಡ್ಡಿ ಸೇರಿ ಮಾಸಿಕ 11,390 ರೂ.ನಂತೆ 60 ಸಮ ಕಂತುಗಳಲ್ಲಿ ಮರುಪಾವತಿಸುವಂತೆ ತಿಳಿಸಿ ಸಾಲ ಮಂಜೂರು ಮಾಡಿತ್ತು.
ಸಾಲದ ಕಂತುಗಳನ್ನು ಪಾವತಿಸುತ್ತಾ ಬಂದಿದ್ದ ಗ್ರಾಹಕರು ಕೋವಿಡ್ ವೇಳೆ ಆರ್ಥಿಕ ತೊಂದರೆಯಿಂದಾಗಿ 4 ಕಂತು ಪಾವತಿಸಿರಲಿಲ್ಲ.ಆಗ ಆರ್ಬಿಐ ಕೋವಿಡ್ ಅವಧಿಯಲ್ಲಿ ಸಾಲದ ಕಂತು ತುಂಬಲು ಒತ್ತಾಯಿಸುವಂತಿಲ್ಲ. ಬಾಕಿ ಕಂತು ನಂತರ ಕಟ್ಟಿಸಿಕೊಳ್ಳಬಹುದು ಎಂದು ಹೊರಡಿಸಿದ ಗೈಡ್ಲೈನ್ ಲಾಭ ಪಡೆದ ಗ್ರಾಹಕರು ನಂತರ ಬಾಕಿ ಕಂತು ಸೇರಿ ಒಟ್ಟು 60 ಕಂತು ಕಟ್ಟಿ ಪೂರ್ಣಗೊಳಿಸಿದ್ದರು.

ಆದರೂ ಮತ್ತೆ ಹೆಚ್ಚುವರಿ 6 ಕಂತು ವಸೂಲಿ ಮಾಡಿ, ಇನ್ನೂ ಬಾಕಿ ಇದೆ, ಕಂತುಗಳನ್ನು ಕಟ್ಟುವಂತೆ ಬ್ಯಾಂಕ್ ಗ್ರಾಹಕರಿಗೆ ನೋಟಿಸ್ ಕಳಿಸಿತ್ತು. ಅಲ್ಲದೆ ಬ್ಯಾಂಕ್ ಸಿಬ್ಬಂದಿ ಪದೇ ಪದೇ ಮನೆ ಬಳಿ ಹೋಗಿ ಸಾಲದ ಕಂತು ತುಂಬುವಂತೆ ಒತ್ತಾಯಿಸುತ್ತಿದ್ದರು.
ಈ ಕಾರಣಕ್ಕಾಗಿ ಗ್ರಾಹಕರು ಹೆಚ್ಚುವರಿಯಾಗಿ ಕಟ್ಟಿಸಿಕೊಂಡಿರುವ 68,340 ರೂ. ಬಡ್ಡಿ ಸಹಿತ ಹಿಂದಿರುಗಿಸಲು ಮತ್ತು ಅಡಮಾನ ಪತ್ರದ ರಿ ಕನ್ವೆಯನ್ಸ್ ಡೀಡ್ ಮಾಡಿಕೊಡುವಂತೆ ಹಾಗೂ ಸಾಲದ ಭದ್ರತೆಗೆ ಪಡೆದುಕೊಂಡಿದ್ದ ಚೆಕ್ ಹಿಂತಿರುಗಿಸಲು ಅದೇಶಿಸಬೇಕೆಂದು ಕೋರಿ ಗ್ರಾಹಕರು ವಕೀಲರ ಮೂಲಕ ದಾವಣಗೆರೆ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸಾಕ್ಷಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಸಿ.ಎಸ್.ತ್ಯಾಗರಾಜನ್ ಮತ್ತು ಸದಸ್ಯರಾದ ಬಿ.ಯು.ಗೀತಾ ದೂರುದಾರರ ದೂರನ್ನು ಪುರಸ್ಕರಿಸಿ ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಮೊತ್ತದಲ್ಲಿ ಚೆಕ್ಗಳು ಅಮಾನ್ಯ ವಾದ ಶುಲ್ಕ ಮುರಿದು 57,740 ರೂ. ಹಿಂದಿರುಗಿಸಬೇಕು.
ಮಾನಸಿಕ ತೊಂದರೆ ಕೊಟ್ಟಿದ್ದಕ್ಕಾಗಿ 25000 ಪರಿಹಾರ, ದೂರಿನ ವೆಚ್ಚ 5000 ಮತ್ತು ರಿ ಕನ್ವೆಯನ್ಸ್ ಡೀಡ್ ಮಾಡಿ ಯಾವುದೇ ಸಾಲ ಬಾಕಿ ಇರುವುದಿಲ್ಲ ಎಂದು ಪ್ರಮಾಣ ಪತ್ರ ನೀಡಿ, ಸಾಲದ ಭದ್ರತೆಗೆ ಪಡೆದುಕೊಂಡಿದ್ದ ಚೆಕ್ ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ. ದೂರುದಾರರ ಪರವಾಗಿ ಬಿ.ಬಸವರಾಜ್ ಉಚ್ಚಂಗಿದುರ್ಗ ವಾದ ಮಂಡಿಸಿದ್ದರು