ದಾವಣಗೆರೆ :ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಜನಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲ. ಆದರೆ ಅವರ ಬಗ್ಗೆ ಮಾತನಾಡಿರುವವರು ಯಾವ ಉದ್ದೇಶ ಇಟ್ಟುಕೊಂಡು, ಯಾವ ದೊಡ್ಡಸ್ತಿಕೆಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ಜನರು ಮಾತನಾಡುತ್ತಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೆಸರೇಳದೆ ಕಿಡಿ ಕಾರಿದರು.
ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಅವರ ಬಗ್ಗೆ ಮಾತನಾಡಿರುವವರಿಗೆ ಗೊತ್ತು ನಾವೇಕೆ ಮಾತನಾಡಿದ್ದೇವೆ ಎನ್ನುವುದು. ಆದರೆ ಎಸ್.ಎಸ್.ಮಲ್ಲಿಕಾರ್ಜನ್ ಶಾಸಕರು, ಸಚಿವರು ಆಗಿದ್ದಾಗ ಮಾಡಿರುವ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಯನ್ನು ಎಲ್ಲರೂ ನೋಡಿದ್ದಾರೆ. ಆದರೂ ಅವರ ಬಗ್ಗೆ ಮಾತನಾಡಿರುವವರು ಯಾವ ಉದ್ದೇಶ ಇಟ್ಟುಕೊಂಡು, ಯಾವ ದೊಡ್ಡಸ್ತಿಕೆಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೋವಿಡ್ ವೇಳೆ ಎಸ್.ಎಸ್.ಮಲ್ಲಿಕಾರ್ಜುನ್ ಮುಂಜಾನೆ 4 ಗಂಟೆ ತನಕ ಕುಳಿತುಕೊಂಡು ಕರೆ ಮಾಡಿದ ಜನರಿಗೆ ಚಿಕಿತ್ಸೆ ಸೇರಿದಂತೆ ಎಲ್ಲ ವಿಧದಲ್ಲೂ ಸಹಾಯ ಮಾಡಿದ್ದಾರೆ. ಇಂಥವರ ಬಗ್ಗೆ ಮಾತಾಡಲು ಒಬ್ಬ ವ್ಯಕ್ತಿಗೆ ಯಾವ ರೀತಿಯ ಹಕ್ಕಿದೆ ಎನ್ನುವುದನ್ನು ಕೇಳಬೇಕಿದೆ. ಎಷ್ಟೋ ಜನಕ್ಕೆ ಆಸ್ಪತ್ರೆ ಬಿಲ್ ಪಡೆದಿಲ್ಲ. ಈ ರೀತಿಯ ಜನಾನುರಾಗಿ ಮಲ್ಲಿಕಾರ್ಜುನ್ ಮಾತ್ರ ನಮಗೆ ಗೊತ್ತಿರೋದು. ಆದರೆ ಅವರು ಯಾವ ಮಲ್ಲಿಕಾರ್ಜುನ್ ಬಗ್ಗೆ ಮಾತನಾಡಿದ್ದಾರೋ ಗೊತ್ತಿಲ್ಲ ಎಂದರು.
ಕೆಲ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಆರೋಪ ಮಾಡಿದವರಿಗೆ ಅಂಥಹ ಅಧಿಕಾರಿಗಳ ಬಗ್ಗೆ ವೈಯಕ್ತಿಕ ಹಿತಾಸಕ್ತಿ ಏನಿದೆ ಎನ್ನುವುದನ್ನು ಅವರನ್ನೇ ಕೇಳಬೇಕು. ರಾಜಕೀಯ ಅಂದಾಗ ಅವಕಾಶವಾದಿತನ ಇರುತ್ತೆ. ಆದರೆ ಮಲ್ಲಿಕಾರ್ಜುನ್ ಅಧಿಕಾರದಲ್ಲಿ ಇರಲಿ. ಇಲ್ಲದಿರಲಿ ಜನಸೇವೆ ಮಾಡಬೇಕೆಂದು ನಿಂತಿರುವವರು. ಅವರಿಗೆ ಜನ ಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲ. ನಮಗೆ ಜನಸೇವೆ ಮಾಡಬೇಕೆಂಬ ಬದ್ಧತೆ ಇದೆ.
ಜನರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕೆನ್ನುವುದು ನಮಗೆ ಗೊತ್ತಿದೆ. ಅದನ್ನು ಮತ್ತೊಬ್ಬರಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಹೆಸರೇಳದೆ ತಿರುಗೇಟು ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಶಾಸಕರ ಈ ವರ್ತನೆ ಕುರಿತು ಪಕ್ಷದ ರಾಜ್ಯಾಧ್ಯಕ್ಷರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಆದರೆ ಪತ್ರ ಬರೆದಿಲ್ಲ ಎಂದರು.