ದಾವಣಗೆರೆ ; ಮಾಜಿ ಸಚಿವರಾದ ಎಂ.ಪಿ ರೇಣುಕಾಚಾರ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಬೇಕು. ಈ ಬಗ್ಗೆ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಲಾಗುವುದು ಇದೇ ಡಿಸೆಂಬರ್ ೩೧ ರೊಳಗೆ ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟಕದಿಂದ ನಿಯೋಗ ತೆರಳಲಿದ್ದೇವೆ ಎಂದು ಹೊನ್ನಾಳಿ ತಾಲ್ಲೂಕಿನ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷ ವಿಶಿಷ್ಠ ಮತ್ತು ವಿಭಿನ್ನವಾಗಿರುವ ಶಿಸ್ತಿನ ಪಕ್ಷದಲ್ಲಿದ್ದು ಕೊಂಡು ಪಕ್ಷದಿಂದ ಮೊದಲಬಾರಿಗೆ ಆಯ್ಕೆಯಾದ ಸಂದರ್ಭದಲ್ಲಿ ಎಂ.ಪಿ. ರೇಣುಕಾಚಾರ್ಯರವರು ದೇಶದ ಯಾವುದೇ ರಾಜ್ಯದಲ್ಲಿ ನಡೆಯದೇ ಇರುವಂತಹ ಬಂಡಾಯದ ಪ್ರವೃತ್ತಿಗೆ ನಾಂದಿಯಾಡಿ ಪಕ್ಷದಲ್ಲಿ ಗುಂಪುಗಾರಿಕೆ, ಶಾಸಕರ ಗುಂಪನ್ನು ಕಟ್ಟುವ ಮುಖಾಂತರ ಚಹಾ ಕೂಟಕ್ಕೆ ಸೇರಿದ ನೆಪವೊಡ್ಡಿ ತಾವೇ ಮಾಧ್ಯಮಗಳಿಗೆ ಕೊಟ್ಟು ಪ್ರಚಾರ ಮಾಡಿ ಪಕ್ಷದ ಘನತೆಗೆ ಚುತಿ ತಂದಂತಹ ಕರ್ನಾಟಕ ರಾಜ್ಯದ ಅತ್ಯಂತ ಕಳಂಕಿತ ವ್ಯಕ್ತಿ.
ತಾನು ಆಡುವ ಮಾತಿನಲ್ಲಿ ಬದ್ದತೆ ಇಲ್ಲದೆ ಮನಬಂದಂತೆ ಮಾತನಾಡುತ್ತಾ ಪಕ್ಷದ ದೇಶದ ಹೆಮ್ಮೆಯ ಪ್ರಧಾನಿ ಜಗತ್ತೇ ಮೆಚ್ಚುವ ನಾಯಕ ನರೇಂದ್ರ ಮೋದಿಯವರ ಹೆಸರನ್ನು ಹೇಳಿದರೆ ಚುನಾವಣೆಯಲ್ಲಿ ಮತ ಹಾಕುತ್ತಾರಾ ? ಎಂದು ಸಭೆಯಲ್ಲಿ ಮಾತನಾಡುವಂತಹ ಕೀಳರಿಮೆಯ ವ್ಯಕ್ತಿತ್ವದವರು ಸದಾ ಪಕ್ಷದಲ್ಲಿದ್ದುಕೊಂಡು ಪಕ್ಷದ ಹಿರಿಯರಿಗೆ ಈ ಹಿಂದಿನ ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ಟೀಕಿಸಿದ್ದು ವಿಷಾಧಕರ ಸಂಗತಿ ಎಂದರು.
ದಾವಣಗೆರೆಗೆ ಬಂದು ತಮ್ಮ ಕಾರ್ಯಾಲಯಕ್ಕೆ ಬಂದು ಬಿ.ಜೆ.ಪಿ.ಯಲ್ಲಿ ಯಾವುದು ಸರಿಯಿಲ್ಲ. ಬಿ.ಜೆ.ಪಿ. ಮುಳಗುವ ಹಡಗು ಎಂದು ಹೇಳಿ ಬೆಂಗಳೂರಿನಿಂದ ವಾಪಸ್ಸು ಬರುತ್ತ ಪಕ್ಷದಲ್ಲಿ ಎಲ್ಲವೂ ಸರಿ ಹೋಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ರವರನ್ನು ಗೌಪ್ಯವಾಗಿ ಭೇಟಿ ಮಾಡಿ ಕಾಂಗ್ರೇಸ್ ಸೇರಲು ಸಮ್ಮತಿಸಿ ಮಾನಸಿಕವಾಗಿ ಬಿ.ಜೆ.ಪಿ ಗೆ ದ್ರೋಹ ಮಾಡಿದವರು ಪಕ್ಷಕ್ಕೆ ಮುಜುಗರ ನೀಡುತ್ತಾ ವಿವಾದತ್ಮಕ ಹೇಳಿಕೆಯನ್ನು ನೀಡುತ್ತಾ ಲೋಕಸಭಾ ಚುನಾವಣೆಯ ಮೊದಲೇ ಅಭ್ಯರ್ಥಿ ವಿಷಯದಲ್ಲಿ ಬಂಡಾಯವೆದ್ದು ದೇಶದಲ್ಲೆ ಪಕ್ಷಕ್ಕೆ ಚುತಿ ತಂದಂತ ವ್ಯಕ್ತಿ.
ಆದ್ದರಿಂದ ಇವರನ್ನು ಭಾರತೀಯ ಜನತಾ ಪಾರ್ಟಿಯಿಂದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಪಕ್ಷದ ಶಿಸ್ತನ್ನು ಉಳಿಸಿ ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಾರ್ಟಿಯನ್ನು ಉಳಿಸುವಂತೆ ರಾಜ್ಯಾಧ್ಯಕ್ಷರಲ್ಲಿ ಮತ್ತು ರಾಷ್ಟ್ರೀಯ ನಾಯಕರಲ್ಲಿ ಮನವಿ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಜಗದೀಶ್,ನೆಲಹೊನ್ನೆ ದೇವರಾಜ್,ಚನ್ನೇಶ್,ಸಿದ್ದೇಶ್,ಮಂಜಣ್ಣ ಮತ್ತಿತರರಿದ್ದರು.