ಪ್ರಯಾಣಿಕರ ಅಮೂಲ್ಯ ಸಮಯ ಉಳಿತಾಯ, ಹಳೆ ಮೈಸೂರು ಭಾಗ-ಉತ್ತರ ಕರ್ನಾಟಕ 65 ಕಿಮೀ , ಬೆ೦ಗಳೂರಿನಿ೦ದ ಚಿತ್ರದುರ್ಗಕ್ಕೆ 110 ಕಿಮೀ ಅ೦ತರ ಕಡಿಮೆ. ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಪ್ರಯಾಣಿಕರ ಸಂಘ ಒತ್ತಾಯ.
ದಾವಣಗೆರೆ:
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಧ್ಯೆ ಹೊಸದಾದ ನೇರ ರೈಲ್ವೇ ಮಾರ್ಗದ ಅಂತಿಮ ಸಮೀಕ್ಷೆ ಕಾರ್ಯ ಪೂರ್ಣಗೊಂದಿದ್ದು, ದಾವಣಗೆರೆ ಮತ್ತು ತುಮಕೂರು ಕಡೆಯಿಂದ ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳುವಂತೆ ಕೇಂದ್ರ ರೈಲ್ವೇ ಇಲಾಖೆಗೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಒತ್ತಾಯಿಸಿದೆ.
ಉದ್ದೇಶಿದ ನೇರ ರೈಲ್ವೇ ಮಾರ್ಗ ಪೂರ್ಣಗೊಂಡು, ರೈಲುಗಳ ಸಂಚಾರ ಶುರುವಾದರೆ ಹಳೆ ಮೈಸೂರು ಭಾಗ-ಉತ್ತರ ಕರ್ನಾಟಕ ಮತ್ತಷ್ಟು ಹತ್ತಿರವಾಗಲಿವೆ. ಬೆಂಗಳೂರು-ದಾವಣಗೆರೆ-ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಮಧ್ಯೆ 65 ಕಿಮೀ ಅಂತರ ಕಡಿಮೆಯಾಗಲಿದೆ ಎಂದು ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ರೈಲ್ವೇ ಇಲಾಖೆಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ, ವಿಜಯಪುರ ಜಿಲ್ಲೆಗಳ ಮಧ್ಯೆ ಇದ್ದ ಅಂತರದಲ್ಲಿ 65 ಕಿಮೀ ಕಡಿಮೆಯಾಗುವ ಜೊತೆಗೆ ಜನ ಸಾಮಾನ್ಯರು, ಪ್ರಯಾಣಿಕರ ಅಮೂಲ್ಯ ಸಮಯ ಉಳಿತಾಯವಾಗಲಿದೆ. ಅಲ್ಲದೇ, ರೈಲ್ವೇ ಇಲಾಖೆಗೆ ಇಂಧನ ಉಳಿತಾಯ, ವಿದ್ಯುತ್ ಉಳಿತಾಯವೂ ಆಗಲಿದೆ. ಮತ್ತಷ್ಟು ಹೊಸ ರೈಲ್ವೇ ನಿಲ್ದಾಣ, ಮಾರ್ಗದಿಂದಾಗಿ ಹೊಸ ಪ್ರಯಾಣಿಕರಿಗೂ ರೈಲ್ವೇ ಸೇವೆ ಒದಗಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೊಸ ರೈಲ್ವೇ ಮಾರ್ಗ ಪೂರ್ಣಗೊಂಡು, ರೈಲ್ವೇ ಸೇವೆ ಶುರುವಾಗುತ್ತಿದ್ದಂತೆ ಬೆ೦ಗಳೂರಿನಿ೦ದ ಚಿತ್ರದುರ್ಗಕ್ಕೆ 110 ಕಿಮೀ ಅ೦ತರ ಕಡಿಮೆಯಾಗುತ್ತದೆ. ಸಿರಾ ಮತ್ತು ಹಿರಿಯೂರು ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಹೊಸದಾಗಿ ರೈಲ್ವೇ ಸೇವೆ ನೀಡಿದಂತಾಗುತ್ತದೆ. ಹೊಸ ನಿಲ್ದಾಣಗಳು, ಹೊಸ ಮಾರ್ಗದಿಂದಾಗಿ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುವುದಲ್ಲದೇ, ತು ಮಕೂರು, ಚಿತ್ರದುರ್ಗ, ದಾವಣಗೆರೆ ಮಾರ್ಗದ ಪ್ರಯಾಣಿಕರಿಗೆ ರೈಲು ಸೇವೆ ನೀಡಿದಂತೆ ಆಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈಗಾಗಲೇ ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದ ರೈಲು ಸಂಚಾರದಲ್ಲಿ ಹೊಸ ಮಾರ್ಗದಿಂದಾಗಿ ಶೇ.50ರಷ್ಟು ರೈಲು ಸಂಚಾರದ ಒತ್ತಡ ಕಡಿಮೆಯಾಗಲಿದೆ. ಶಿವಮೊಗ್ಗವು ಬೆಂಗಳೂರಿನಿಂದ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬಹುದು. ಬೆಂಗಳೂರಿನಿಂದ ಬೆಳಗಾವಿ, ವಿಜಯಪುರ ಮಧ್ಯೆ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ರೈಲು ಸಂಚಾರ ಕನಿಷ್ಟ ಶೇ.35ರಷ್ಟು ಕಡಿಮೆಯಾಗುತ್ತದೆ. ಪರಿಣಾಮ ಹರಿಹರ-ಬೀರೂರು-ಅರಸೀಕೆರೆ ಮಾರ್ಗದಲ್ಲಿ ರೈಲು ದಟ್ಟಣೆ ಕಡಿಮೆಯಾಗುವುದರಿಂದ ಹೆಚ್ಚಿನ ಸರಕು ಸಾಗಾಣೆಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಉದ್ದೇಶಿತ ಹೊಸ ರೈಲ್ವೇ ಮಾರ್ಗದಿಂದ ಪ್ರಯಾಣದ ಅಂತರ ಕಡಿಮೆಯಾಗುತ್ತದೆ. ಇದರಿಂದ ಇಂಧನ, ಸಾಕಷ್ಟು ಪ್ರಯಾಣದ ಸಮಯ ಉಳಿಯುತ್ತದೆ. ಅಷ್ಟೇ ಅಲ್ಲ, ಪ್ರವಾಸೋದ್ಯಮ ಕ್ಕೂ ನೂತನ ಮಾರ್ಗ ಸಹಕಾರಿಯಾಗಲಿದೆ. ಐತಿಹಾಸಿಕ ಚಿತ್ರದುರ್ಗ ಕೋಟೆ ಕೊತ್ತಲ ವೀಕ್ಷಣೆಗೆ ದೇಶ, ವಿದೇಶದಿಂದ ಬರುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಟಿ, ಉದ್ಯಮಗಳೂ ಚೇತರಿಕೆ ಕಾಣುತ್ತವೆ. ದಾವಣಗೆರೆ ಚಿತ್ರದುರ್ಗ ಮಧ್ಯೆ ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ ಹಾಗೂ ಊರಕೇರೆಗೂ ರೈಲ್ವೇ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ರೋಹಿತ್ ಎಸ್.ಜೈನ್ ಹೇಳಿದ್ದಾರೆ.