ದಾವಣಗೆರೆ : ‘ಲೋಕಸಭೆ ಚುನಾವಣೆಯಲ್ಲಿ ರಾಜ್ಯ ನಾಯಕರು ಬಂದು ನಾಟಕ ಮಾಡಿ ಹೋದರು, ಅವರು ನಮ್ಮನ್ನು ಮಾತನಾಡಲೂ ಬಿಡಲಿಲ್ಲ. ಚುಪ್ ಚುಪ್ ಎಂದು ಬಾಯಿ ಮುಚ್ಚಿಸಿದರು. ರಾಜ್ಯ ಹಾಗೂ ಜಿಲ್ಲಾ ನಾಯಕರ ಅಸಹಕಾರದಿಂದಲೇ ಸೋಲಾಯಿತು’ ಎಂದು ಬಿಜೆಪಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸೋಲಿಗೆ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಜಿಲ್ಲಾ ಘಟಕವು ಒಡೆದ ಮನೆಯಾಗಿರುವುದು ಸತ್ಯವಾದ ಮಾತು. ರಾಜ್ಯ ನಾಯಕರೇ ಬಂದು ಸರಿಪಡಿಸಬೇಕಿತ್ತು. ನನ್ನ ಜನ್ಮದಿನ ಆಚರಣೆ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭಕ್ಕೆ ರಾಜ್ಯ ನಾಯಕರಿಗೆ ಕರೆದರೂ ಬರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಎಲ್ಲವನ್ನೂ ಸರಿಪಡಿಸಬೇಕಾದ ರಾಜ್ಯ ನಾಯಕರು, ಜಿಲ್ಲೆಯ ಒಂದು ಬಣದ ಮಾತು ಕೇಳಿ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿಕೊಂಡು ಹೋದರು. ಯಾರೆಲ್ಲ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ’ ಎಂದು ಎಂ.ಪಿ.ರೇಣುಕಾಚಾರ್ಯ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ
ಪತ್ನಿ ಗಾಯತ್ರಿ ಸೋಲಿಗೆ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಕಿಡಿ ಕಾಡಿದರು.ದಾವಣಗೆರೆ ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿದೆ, ಇದು ಸತ್ಯವಾದ ಮಾತು.ಚುನಾವಣೆಯಲ್ಲಿ ರಾಜ್ಯ ನಾಯಕರು ಬಂದು ನಾಟಕ ಮಾಡಿ ಹೋದರು. ಎಷ್ಟು ನಾಟಕವಾಡಿದರೂ ಅಂದರೆ ನಮಗೆ ಮಾತನಾಡಲು ಕೂಡ ಬಿಡಲಿಲ್ಲ. ಒಂದು ಕಡೆಯ ಮಾತು ಕೇಳಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು ಎಂದಿದ್ದಾರೆ.
ನನ್ನ ಬರ್ತ್ಡೇಗೆ ಬರಲಿಲ್ಲ, ಮತದಾರರಿಗೆ ಕೃತಜ್ಞತಾ ಸಮಾರಂಭಕ್ಕೂ ಬರಲಿಲ್ಲ. ಕೃತಜ್ಞತಾ ಸಮಾರಂಭಕ್ಕೆ ಯಾರು ಬಂದಿಲ್ವೋ ಅವರೇ ಸೋಲಿಗೆ ಕಾರಣ. ಎಲ್ಲಾ ಸಮಾರಂಭಕ್ಕೂ ನಾವು ಅವರನ್ನು ಆಹ್ವಾನ ಮಾಡಿದ್ದರೂ ಬಂದಿಲ್ಲ. ಎಂಪಿಆರ್ ಮತ್ತು ಟೀಮ್ನಿಂದಲೇ ಸೋಲು ಅನುಭವಿಸಿದ್ವಿ ಎಂದು ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಳ್ಳೆಯ ಬಜೆಟ್ ನೀಡಿದ್ದಾರೆ. ಯುವಕ, ಯುವತಿಯರು, ಮಹಿಳೆಯರು, ರೈತರು ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಕೂಡ ಲೋಕಾ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ್ದ.
ನನಗೆ ಮಾತನಾಡಲು ಅವಕಾಶ ನೀಡಲಿಲ್ಲ
ನಮ್ಮ ಚುನಾವಣೆ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ನಾಯಕರು ಬಂದು ನಾಟಕ ಮಾಡಿ ಹೋದರು. ನನಗೆ ಮಾತನಾಡಲು ಬಿಡಲಿಲ್ಲ. ಅವಕಾಶ ನೀಡಿದ್ದರೆ ಸರಿಯಾಗಿ ಹೇಳುತ್ತಿದ್ದೆ. ಎಲ್ಲವನ್ನೂ ಸರಿಪಡಿಸಬೇಕಾಗಿದ್ದ ನಾಯಕರು ಒಂದೇ ಕಡೆಯ ಮಾತುಗಳನ್ನು ಕೇಳಿ ತಪ್ಪು ಅಭಿಪ್ರಾಯ ಮೂಡಿಸಿಕೊಂಡು ಹೋದರು.ಅದರಿಂದಾಗಿ ನಾವು ಸೋತೆವು. ಯಾರ್ಯಾರು ಏನೇನು ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುತ್ತೇವೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ. ಅದಕ್ಕೂ ಈ ವಿಚಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೇ ನೀಡಿದರು