
ಭದ್ರಾವತಿ : ಕ್ರೈಂ ಸಿಟಿ ಭದ್ರಾವತಿಯಲ್ಲಿ ಮೂರನೇ ಬಾರಿಗೆ ಗುಂಡಿನ ದಾಳಿ ನಡೆದಿದ್ದು, ಜನರಿಗೆ ಖಾಕಿ ಪಡೆ ಮೇಲೆ ಒಂದಿಷ್ಟು ನಂಬಿಕೆ ಬಂದಿದೆ.
ಈಗಾಗಲೇ, ಗಾಂಜಾ, ಇಸ್ಪೀಟ್, ಓಸಿ, ಮೊಬೈಲ್ ಕಳ್ಳತನ ಹೀಗೆ ಹತ್ತಾರು ಕ್ರೈಂಗಳು ಹೆಚ್ಚಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿತ್ತು..ಯಾವಾಗ ಭದ್ರಾವತಿಯಲ್ಲಿ ಅಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಬಂದಿತೋ ಆಗ ಐಜಿಪಿ ರವಿಕಾಂತೇಗೌಡ ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಗೆ ಖಡಕ್ ಸೂಚನೆ ನೀಡಿದರು. ಅಲ್ಲಿಂದ ಭದ್ರಾವತಿ ಪೊಲೀಸರು ರೌಡಿಗಳ ಹೆಡೆಮುರಿ ಕಟ್ಟಲು ಶುರು ಮಾಡಿದರು..ಪ್ರಥಮವಾಗಿ ಕಾಗದ ನಗರ ಮಹಿಳಾ ಪೊಲೀಸ್ ಸಿಪಿಐ ನಾಗಮ್ಮ ಇಬ್ಬರಿಗೆ ಗುಂಡಿನ ರುಚಿ ತೋರಿಸಿ ಜೈಲಿಗೆ ತಳ್ಳಿದರು. ಇದಾದ ಬಳಿಕ ಓಲ್ಡ್ ಟೌನ್ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಕಾಲಿಗೆ ಫೈರ್ ಮಾಡಿದ್ದಾರೆ.
ಏನಿದು ಘಟನೆ
ಭದ್ರಾವತಿಯಲ್ಲಿ ಈ ಬಾರಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಲು ಹೋದಾಗ ನಾಡ ಪಿಸ್ತೂಲ್ ನಿಂದ ಗುಂಡು ಹಾರಿಸಲು ಮುಂದಾದ ವೇಳೆ ಹಳೇನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಪ್ರತಿ ದಾಳಿ ಮಾಡಿ
ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.


ಯಾರು ಆರೋಪಿ
ಭದ್ರಾವತಿ ನಗರದ ಅನ್ವರ್ ಕಾಲೋನಿ ನಿವಾಸಿ, ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನಸ್ರು ಅಲಿಯಾಸ್ ನಸ್ರುಲ್ಲಾ (21) ಬಂಧಿತ ಆರೋಪಿ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ.
ಏ. 14 ರಂದು ಹಳೇನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. 1.4 ಕೆಜಿ ಗಾಂಜಾ ವಶಕ್ಕೆ ಪಡೆದಿತ್ತು. ಆದರೆ ಪ್ರಕರಣದ ಮುಖ್ಯ ಆರೋಪಿ ನಸ್ರು ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದರು.
ಏ. 15 ರ ಮುಂಜಾನೆ ಆರೋಪಿ ಅಡಗಿಕೊಂಡಿದ್ದ ಸ್ಥಳದ ಮೇಲೆ ಪಿಎಸ್ಐ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿತ್ತು.ಈ ವೇಳೆ ಆರೋಪಿಯು ತನ್ನ ಬಳಿಯಿದ್ದ ಡ್ರ್ಯಾಗರ್ ಮೂಲಕ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ. ನಂತರ ಕಂಟ್ರಿ ಪಿಸ್ತೂಲ್ ನಿಂದ ಪೊಲೀಸರ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದ್ದ. ತಕ್ಷಣವೇ ಪಿಎಸ್ಐ ಚಂದ್ರಶೇಖರ್ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಜೊತೆಗೆ ಕಂಟ್ರಿ ಪಿಸ್ತೂಲ್ ನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಜಿ ಕೆ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಪಿ ಹಾಗೂ ಆತನ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.