
ಶಿವಮೊಗ್ಗ,: ಇಡಿ ದಾಳಿ ನಿರೀಕ್ಷಿತ ಕೇಂದ್ರ ಸರ್ಕಾರದ ಬೆದರಿಕೆಯ ತಂತ್ರ ಇದಕ್ಕೆ ಎದುರುವುದಿಲ್ಲ ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಅದನ್ನು ಬಿಟ್ಟುಬಿಡಿ ಬೇರೆ ಪ್ರಶ್ನೆ ಕೇಳಿ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಿಂದಿನಿಂದಲೂ ಇದೇ ಮಾಡುತ್ತ ಬಂದಿದೆ. ನಮ್ಮ ಜಿಲ್ಲೆಯ ಅವರದೇ ಪಕ್ಷದ ಮುಖಂಡರ ಹಗರಣಗಳನ್ನು ಕೆದಕಿದರೆ ಎಲ್ಲರ ಬಂಡವಾಳ ಬಯಲಾಗುತ್ತದೆ. ಬಿಡುವುದಿಲ್ಲ, ಮುಂದಿನ ದಿನಗಳಲ್ಲಿ ನಾವು ಕೂಡ ಕೈ ಹಾಕುತ್ತೇವೆ. ಅವರದ್ದೆ ಬೇಕಾದಷ್ಟೇ ಇರುವಾಗ ಮೂಡಾ ಎಂದು ಕನವರಿಸುತ್ತ ಇದ್ದಾರೆ. ಸಿಎಂ. ರಾಜೀನಾಮೆ ಪ್ರಶ್ನೆಯೇ ಇಲ್ಲ. ಈಗಾಗಲೇ ಹಲವು ಬಾರಿ ಇದಕ್ಕೆ ಸಿಎಂ ಉತ್ತರ ನೀಡಿದ್ದಾರೆ ಎಂದರು.
ನಮ್ಮ ರಾಜ್ಯ ಹಾಗೂ ದೇಶದ ಕಲುಷಿತ ನದಿಗಳು ಶುದ್ಧವಾಗಬೇಕಾಗಿದೆ. ಶುದ್ಧ ಕುಡಿಯುವ ನೀರು ನೀಡುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಗಳಲ್ಲಿ ಪರಿಸರ ಜಾಗೃತಿ ಅಂಶಗಳನ್ನು ಸೇರಿಸಿ ಸಾಮಾನ್ಯಜ್ಞಾನ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಮತ್ತು ಮಾನವೀಯತೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ನಿರ್ಮಲಾ ತುಂಗಾಭದ್ರಾ ಪಾದಯಾತ್ರೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡುತ್ತಿದೆ. ಸರ್ಕಾರದಿಂದ ಇದಕ್ಕೆ ಬೇಕಾದ ನೆರವು ನೀಡಲಾಗುವುದು ಎಂದರು. ಸಂಸದ ಬಿ.ವೈ.ರಾಘವೇಂದ್ರ ಸಿ.ಎಂ.ರಾಜೀನಾಮೆ ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅಣ್ಣತಮ್ಮ ಇಬ್ಬರು ರಾಜೀನಾಮೆ ಕೇಳುತ್ತಾ ಇದ್ದಾರೆ. ಆದರೆ ಪರಿಣಾಮವೇನು ಆಗುವುದಿಲ್ಲ. ಬಿಜೆಪಿಯವರಿಗೆ ಬೇರೆ ಏನೂ ಕೆಲಸವಿಲ್ಲ. ಮಾಧ್ಯಮದವರು ಕೂಡ ನಿಮ್ಮ ಸಮಯ ವ್ಯರ್ಥಮಾಡಬೇಡಿ,ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಕೇಳಿ ಎಂದರು. ಉಪಚುನಾವಣೆಯಲ್ಲಿ ಮೂರು ಕ್ಷೇತ್ರ ಕಾಂಗ್ರೆಸ್ ಗೆಲ್ಲಲಿದೆ, ಮುಂದೆ ಬರುವ ಪಂಚಾಯತ್ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಗೆಲಲ್ಲಿದ್ದು, ಬಿಜೆಪಿಯ ಭಾವನಾತ್ಮಾಕ ರಾಜಕಾರಣಕ್ಕೆ ಇನ್ನೂ ಅವಕಾಶವಿಲ್ಲ ಎಂದರು.

