
ದಾವಣಗೆರೆ : BJPಗೆ ಕಾಂಗ್ರೆಸ್ ಚೊಂಬಾಘಾತ ನೀಡಿದೆ.. ಚೊಂಬುಅನ್ನ ಪ್ರದರ್ಶಿಸೋ ಮೂಲಕ ಕಾಂಗ್ರೆಸ್ ನಾಯಕರು ಬಿಜೆಪಿಗರ ಜಂಗಾಬಲವೇ ಉಡುಗಿ ಹೋಗುವಂತೆ ಮಾಡಿದ್ದಾರೆ. ಯಾಕಂದ್ರೆ ಕಳೆದ 10 ವರ್ಷಗಳಿಂದ ಕೇಂದ್ರ ಬಿಜೆಪಿ ನಾಯಕರು ಕರ್ನಾಟಕಕ್ಕೆ ಕೊಟ್ಟಿದ್ದು ಚೊಂಬು. ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಕನ್ನಡಿಗರಿಗೆ ಅನ್ಯಾಯವೆಸಗುತ್ತಿದ್ದಾರೆ.. ಆದ್ರೆ ಈ ಸಲ ಕನ್ನಡಿಗರು ಎಚ್ಚೆತ್ತುಕೊಂಡು ಬಿಜೆಪಿಗೆ ಚುನಾವಣೆಯಲ್ಲಿ ಬಿಸಿ ಮುಟ್ಟಿಸ್ತಾರೆ ಅಂತೇಳಿ ಡಿಸಿಎಂ ಡಿಕೆಶಿ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ BJP ಕನ್ನಡಿಗರ ಪಿಕ್ಪಾಕೆಟ್ ಮಾಡಿದ್ದು ಹೇಗೆ.? ಕನಕಪುರದ ಬಂಡೆ ಮಾತು ಬಿಜೆಪಿಗರ ಎದೆ ಬಡಿತ ಜೋರು ಮಾಡಿದ್ದು ಹೇಗೆ ಅಂದ್ರಾ.?
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜಾಹೀರಾತುಗಳ ಮೂಲಕ ಆರೋಪ – ಪ್ರತ್ಯಾರೋಪ ಮಾಡುವ ಬಿಜೆಪಿ ಹಾಗೂ ಕಾಂಗ್ರೆಸ್ನ ತಂತ್ರ ಮುಂದುವರಿದಿದೆ. ಈ ಮಧ್ಯೆ, ಕಾಂಗ್ರೆಸ್ ಪಿಕ್ಪಾಕೆಟ್ ಮಾಡುತ್ತಿದೆ ಅಂತೇಳಿ ಟೀಕಿಸಿ ಬಿಜೆಪಿ ನೀಡಿರುವ ಜಾಹೀರಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾವು ನೀಡಿರುವ ಚೊಂಬಿನ ಜಾಹೀರಾತನ್ನು ಅರಗಿಸಿಕೊಳ್ಳುವುದು ಬಿಜೆಪಿಯವರಿಂದ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ನಮ್ಮ ಮೇಲೆ ಆರೋಪ ಮಾಡಿ ಜಾಹೀರಾತು ನೀಡುತ್ತಿದ್ದಾರೆ ಅಂತೇಳಿ ಕುಟುಕಿದ್ದಾರೆ. ಬರ ಪರಿಹಾರ ನೀಡುವುದಾಗಿ ಕೇಂದ್ರ ಹೇಳಿದೆ, ನಮಗೆ ಪರಿಹಾರ ಸಿಗುತ್ತೆ. ನಮಗೆ ನ್ಯಾಯ ಸಿಗುತ್ತೆ. ಸಾಂಕೇತಿಕವಾಗಿ ಹೋರಾಟ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.
ವಿದ್ಯುತ್ ಬಿಲ್ ಅನ್ನು ಏರಿಕೆ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಸರ್ಕಾರ ಎಲ್ಲಾ ಗ್ರಾಹಕರಿಗೂ ಗೃಹಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಬಿಲ್ ರಿಯಾಯಿತಿ ನೀಡಿ ಜನರಿಗೆ ಹೊರೆಯಾಗದಂತೆ ಎಚ್ಚರಿಕೆ ವಹಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ಕಳೆದ ತಿಂಗಳೂ 1.50 ರೂ.ನಷ್ಟು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿದೆ. ಆದರೆ ಬಿಜೆಪಿಯವರು ಜಾಹೀರಾತಿನಲ್ಲಿ ನಮ್ಮ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಅಂತೇಳಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಲ್ಲಿ ಜನರ ಜೇಬಿನ ಕಳ್ಳತನ ಮಾಡುತ್ತಿದೆ. ಶೇ.40 ರಷ್ಟು ಲಂಚದ ಪ್ರಕರಣ ಬಿಗ್ ಪಿಕ್ಪ್ಯಾಕೆಟ್ಗೆ ದೊಡ್ಡ ಉದಾಹರಣೆ. ಅದನ್ನೆಲ್ಲಾ ಮರೆತು ಬಿಜೆಪಿ ಕಾಂಗ್ರೆಸ್ ವಿರುದ್ಧ ಪಿಕ್ಪ್ಯಾಕೆಟ್ ಆರೋಪ ಮಾಡಿರುವುದು ನಾಚಿಕೆಗೇಡಿನ ಸಂಗತಿ ಅಂತೇಳಿ ಡಿಕೆಶಿ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್ ಪಕ್ಷ ಸಾಂಕೇತಿಕ ಹೋರಾಟ ನಡೆಸಿದೆ.


ಕೇಂದ್ರದಿಂದ ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಜನರ ಗಮನಕ್ಕೆ ತರುವುದು ನಮ್ಮ ಜವಾಬ್ದಾರಿ ಅಂತೇಳಿ ಡಿಕೆಶಿ ಹೇಳಿದ್ದಾರೆ.
ಇನ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿನ್ನೆ ಹಾಸನದಲ್ಲಿ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಯಾವ ಅನ್ಯಾಯವಾಗಿದೆ ಎಂದು ದೇವೇಗೌಡರು ಕಣ್ಣೀರು ಹಾಕಿದ್ದಾರೆ? ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಮಾಡಿತ್ತು. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದ ಜನ ಮುಖ್ಯಮಂತ್ರಿ ಮಾಡಿದ್ದಾರೆ, ಹಾಸನದವರಲ್ಲ. ಅವರಿಗೆ ತಮ್ಮ ಕೊಡುಗೆ ಏನು ಎಂದು ಹೇಳಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ ಅಂತೇಳಿ ಡಿಕೆಶಿ ತಿರುಗೇಟನ್ನ ಕೊಟ್ಟಿದ್ದಾರೆ.
ಜೆಡಿಎಸ್ ಅಧಿಕೃತವಾಗಿ ಸ್ರ್ಪಧಿಸಿರುವ 3 ಹಾಗೂ ಅನಕೃತವಾಗಿ ಸ್ಪರ್ಧೆಯಲ್ಲಿರುವ 1 ಕ್ಷೇತ್ರ ಸೇರಿದಂತೆ 4 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಅಂತೇಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಹೊಸದಾಗಿ ರಾಜಕಾರಣ ಮಾಡುತ್ತಿಲ್ಲ, ಚುನಾವಣೆಯಲ್ಲಿ ಗೆದ್ದ ದಿನದಿಂದಲೂ ಸೇವೆ ಮಾಡುತ್ತಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಕೋವಿಡ್ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಔಷಧಿ, ಆಹಾರ, ಚಿಕಿತ್ಸೆ ಸೇರಿದಂತೆ ಯಾವುದಕ್ಕೂ ಸ್ಪಂದಿಸಿರಲಿಲ್ಲ, ಕೊನೆಗೆ ಹೆಣ ಹೂಳಲಿಕ್ಕೂ ಬಂದಿರಲಿಲ್ಲ. ಚುನಾವಣೆ ಎಂಬ ಕಾರಣಕ್ಕೆ ಈಗ ಪದೇಪದೇ ಬರುತ್ತಿದ್ದಾರೆ ಅಂತೇಳಿ ಡಿಕೆಶಿ ಹೇಳಿದ್ದಾರೆ.
ಹಾಗಾದ್ರೆ ಡಿಸಿಎಂ ಡಿಕೆಶಿ ಹೇಳಿದಂತೆ BJPಗೆ ಚೊಂಬಾಘಾತವಾಗಿದ್ಯಾ..? ರಾಜ್ಯದ ಜನರಿಗೆ ಪಿಕ್ಪಾಕೆಟ್ ಮಾಡಿದ್ದೇ BJP ನಾಯಕರಾ.?