


ನಂದೀಶ್ ಭದ್ರಾವತಿ
ಒಂದಾನೊಂದು ಕಾಲದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಟ್ಟಿದ ವಿಐಎಸ್ಎಲ್, ಎಂಪಿಎಂ ಕಾರ್ಖಾನೆಯಿಂದ ವಿಜಯನಗರದಂತೆ ಸಮೃದ್ದಿಯಾಗಿತ್ತು..ಆದರೆ ಬರ ಬರುತ್ತಾ ರಾಜಕೀಯ ಇಚ್ಚಾಶಕ್ತಿ ಕೊರತೆ ಕಾರಣ ಎರಡು ಫ್ಯಾಕ್ಟರಿಗಳು ಅವನತಿಗೊಂಡವು..ಅದರಲ್ಲೂ ಎಂಪಿಎಂ ಕಾರ್ಖಾನೆ ಮುಚ್ಚಿದ ನಂತರ ಅದರ ಸುತ್ತಮುತ್ತ ಇದ್ದ ಕ್ವಾಟರ್ಸ್ ಗಳು, ಇದನ್ನೇ ನಂಬಿಕೊಂಡಿದ್ದ ಜನರು ಬೀದಿ ಪಾಲಾದರು..ಎಷ್ಟೋ ಅಂಗಡಿಗಳು ಮುಚ್ಚಿಹೋದವು..ಸುತ್ತಲಿನ ಕ್ವಾಟರ್ಸ್ ಜನರು ಊರು ತೊರೆದರು..ಈ ನಡುವೆ ಎಂಪಿಎಂ ಸುಪರ್ದಿಯಲ್ಲಿದ್ದ ಕಾಗದನಗರ ಶಾಲೆಗೆ ಬೀಗ ಬಿತ್ತು.. ಹೀಗಿರುವಾಗ ಇಂತಹ ಶಾಲೆಯನ್ನು ಮುಚ್ಚದಂತೆ ಎಲೆ ಮರೆಯಂತೆ ಏಕ ವ್ಯಕ್ತಿಯೊಬ್ಬರು ಹೋರಾಡುತ್ತಿದ್ದಾರೆ..ಹಾಗಾದ್ರೆ ಅವರು ಯಾರು?ಮಾಡುತ್ತಿರುವ ಕೆಲಸವಾದ್ರು ಏನು ಈ ಸ್ಟೋರಿ ನೋಡಿ?

ಮಧುಸುಧೂನ್ ಭದ್ರಾವತಿ, ಚಿಕ್ಕದಿನಿಂದಲೂ ಉಕ್ಕಿನ ನಗರಿ ಘಮಲು ಕುಡಿದು ಬೆಳೆದ ಹುಡುಗ..ಎಲ್ಲಾದರೂ, ಎಂತಾದರೂ ಇರು, ಎಂದಿಂದಿಗೂ ಕನ್ನಡಿಗನಾಗಿರು ಎಂಬಂತೆ ತಾನು ಹುಟ್ಟಿ ಬೆಳೆದ ಊರನ್ನು ಹೆಚ್ಚು ಪ್ರೀತಿಸುವ ವ್ಯಕ್ತಿ…ಸಮಾಜಮುಖಿ ಕೆಲಸ ಮಾಡುವ ಇವರು, ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ…ಯಾವಾಗ ಎಂಪಿಎಂ ಶಾಲೆ ಲಾಕ್ ಆಯ್ತು..ಅವಾಗಿನಿಂದ ಈ ಶಾಲೆ ತೆರೆಯಲು ಸಿಎಂ ಸಿದ್ದರಾಮಯ್ಯ, ಸಚಿವ ಮಧುಬಂಗಾರಪ್ಪ ಬಳಿ ಎಡೆಬಿಡದಂತೆ ಓಡಾಡುತ್ತಿದ್ದಾರೆ..

ಶೌರ್ಯ, ಶಕ್ತಿಗೆ ಯಾವಾಗಲೂ ಭದ್ರಾವತಿ ಹೆಸರಾಗಿದ್ದು, ಈ ಊರಿನ ಪ್ರತಿಯೊಬ್ಬ ವ್ಯಕ್ತಿಯ ಮೈಯಲ್ಲಿ ಕ್ರಾಂತಿಯ ರಕ್ತದ ಹರಿವು ಹರಿಯುತ್ತಿದೆ.ಅಂತೆಯೇ ಮಧುಸೂಧನ್ ನಲ್ಲಿಯೂ ಕೂಡ ಕ್ರಾಂತಿ ಕಿಚ್ಚು ಹತ್ತಿದ್ದು, ಶಾಲೆ ಓಪನ್ ಗೆ ಹೋರಾಟ ಮಾಡುತ್ತಿದ್ದಾರೆ.
ಭದ್ರಾವತಿ ಪಾತಕಿಗಳ ಜತೆಗೆ ಒಂದಿಷ್ಟು ಜ್ಞಾನವಂತರು ಕೂಡ ಇದ್ದು, ಈ ಶಾಲೆಯಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ..ಮಿಲಿಟರಿ, ದೇಶ, ಹೊರ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಒಂದು ಕಾಲದಲ್ಲಿ ಕಾಗದನಗರ ಪ್ರೌಢಶಾಲೆ 8ನೇ ತರಗತಿ ಆಂಗ್ಲ ಮತ್ತು ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವುದು ಪ್ರತಿಷ್ಠೆಯ ವಿಷಯವಾಗಿತ್ತು. ಅದರಲ್ಲೂ ಆಗಿನ ಮುಖ್ಯ ಶಿಕ್ಷಕ ಜಯಣ್ಣ ಅಂದ್ರೆ ಸಾಕು ಇಡೀ ಶಾಲೆ ನಡುಗುತ್ತಿತ್ತು..ಅಲ್ಲದೇ ಜಯಣ್ಣ ಮೇಷ್ಟ್ರು ಕೂಡ ಮಕ್ಕಳನ್ನು ಅಷ್ಟೇ ಶಿಸ್ತಾಗಿ ಬೆಳೆಸುತ್ತಿದ್ದರು..ಯಥಾ ರಾಜ ತಥಾ ಪ್ರಜೆಯಂತೆ ಮುಖ್ಯ ಶಿಕ್ಷಕರಂತೆ ಉಳಿದ ಶಿಕ್ಷಕರು ಮಕ್ಕಳನ್ನು ಶಿಸ್ತು ಬದ್ದಾಗಿ ಬೆಳೆಸುತ್ತಿದ್ದರು ಎಂದು ಮಧುಸೂಧನ್ ನೆನಸಿಕೊಳ್ಳುತ್ತಾರೆ.
ಯಾರಿಗಾಗಿ ಈ ಶಾಲೆ
ಸರಕಾರ ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾರ್ಮಿಕರು ಹಾಗೂ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆ ಮಾಡಿದ್ದ ಈ ಶಾಲೆಯಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೆ, ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜಿಲ್ಲೆಗೆ ಹೆಸರಾಗಿತ್ತು. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಅನೇಕ ಉತ್ತಮ ಶಿಕ್ಷಕರು ಇಂದಿಗೂ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದಿದ್ದಾರೆ. ಅಲ್ಲದೇಒಂದು ಕಾಲದಲ್ಲಿ ಪೋಷಕರಿಗೆ ಮಕ್ಕಳು ಎಲ್ಲಿ ಓದುತ್ತಿದ್ದಾರೆಂದು ಯಾರಾದರೂ ಕೇಳಿದರೆ ಎಂಪಿಎಂ ಶಾಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈ ಶಾಲೆಯಲ್ಲಿ ಇಂದಿಗೂ ಸುಸಜ್ಜಿತ ಕಟ್ಟಡಗಳು, ಲ್ಯಾಬ್, ಪೀಠೋಪಕರಣಗಳಿವೆ. ಸುಂದರ ಪರಿಸರ ಹೊಂದಿದೆ. ಆದರೆ, ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆ ಯಿಂದ ಸರಿಯಾಗಿ ಶಾಲೆಗೆ ಹಾಜರಾಗದೆ, ಪಾಠ ಪ್ರವಚನ ನಡೆಯದೆ ವಿದ್ಯಾರ್ಥಿಗಳ ದಾಖಲಾತಿ ಕುಸಿದಿದೆ. ಎಂಪಿಎಂ ಕಾರ್ಖಾನೆಯ ಅನುಭವವಿ ಲ್ಲದ ಶಾಲಾ ಕಾಲೇಜು ಆಡಳಿತ ಮಂಡಳಿ ಅಧಿ ಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಚಿಂತಿಸದೆ ತಾತ್ಸಾರ ಮಾಡಿದ್ದು ಶಾಲೆ ಮುಚ್ಚಲು ಕಾರಣವಾಗಿದೆ.
ನಾಲ್ಕಾರು ವರ್ಷ ಗಳಿಂದ ದಾಖಲಾತಿ ಕುಸಿತ
ಕಳೆದ ನಾಲ್ಕಾರು ವರ್ಷ ಗಳಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿತವಾಗಿದೆ. ಒಂದು ತರಗತಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳಿರಬೇಕೆಂಬ ನಿಯಮವಿ ದ್ದರೂ ಶಿಕ್ಷಕರು ಎಚ್ಚೆತ್ತುಕೊಂಡಿಲ್ಲ. ಶಿಕ್ಷಕರು ಮತ್ತು ಎಂಪಿಎಂ ಆಡಳಿತ ಮಕ್ಕಳನ್ನು ದಾಖಲಿಸಿಕೊಳ್ಳಲು ಪೋಷಕರ ಮನವೊಲಿಸಲಿಲ್ಲ. ಕಾರ್ಖಾನೆ ಸ್ಥಗಿತಗೊಂಡು ಮನೆಗಳು ಖಾಲಿ ಆದಾಗಿನಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಎಂಪಿಎಂ ಅಧಿಕಾರಿಗಳ ಆದೇಶ ದಂತೆ ಮನೆಮನೆಗೆ ಹೋಗಿ ಮಕ್ಕಳನ್ನು ದಾಖಲಿಸಲು ಪೋಷಕರ ಮನವೊಲಿಸಿದ್ದೇವೆ. ಆದರೆ, ಸಾರ್ವಜನಿಕರು ಎಂಪಿಎಂ ಕಾಡಾಗಿದ್ದು, ಹಗಲಿನಲ್ಲಿಯೇ ಓಡಾಡಲು ಭಯವಾಗುತ್ತೆ ಎಂದು ಮಕ್ಕಳನ್ನು ಸೇರಿಸಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಎಷ್ಟು ವಿದ್ಯಾರ್ಥಿಗಳಿದ್ದಾರೆ
ಆಂಗ್ಲ ಮತ್ತು ಕನ್ನಡ ಮಾಧ್ಯಮ ವಿಭಾಗಗಳಲ್ಲಿ ಕನ್ನಡದಲ್ಲಿ8, 9, 10ನೇ ತರಗತಿಗಳಲ್ಲಿ 8, 17, 11 ಮಕ್ಕಳಿದ್ದರೆ, ಆಂಗ್ಲಮಾಧ್ಯಮದಲ್ಲಿ 17, 23, 19 ಮಕ್ಕಳಿದ್ದಾರೆ. ಕಡೇ ಪಕ್ಷ ಆಂಗ್ಲ ಮಾಧ್ಯಮವಾದರೂ ಉಳಿಸಿಕೊಳ್ಳಲು ಶಾಸಕರಿಗೆ ಮನವಿ ಮಾಡುತ್ತೇವೆ ಎಂದು ಮುಖ್ಯಶಿಕ್ಷಕ ಬಸವರಾಜ್ ಹೇಳುತ್ತಾರೆ.
ಮಕ್ಕಳ ಕೊರತೆ
ಈ ಹಿಂದೆ ಸಾವಿರಾರು ಮಕ್ಕಳಿದ್ದ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ಉತ್ತಮ ಶಾಲೆಯಲ್ಲೀಗ ಮಕ್ಕಳಿಲ್ಲದೆ ಆಯುಕ್ತರು ಮಾನ್ಯತೆ ರದ್ದು ಮಾಡಿದ್ದಾರೆ. ನಾವು ಈ ಆದೇಶ ಪಾಲಿಸಬೇಕಾಗಿದೆ. ಇಲ್ಲಿರುವ ಮಕ್ಕಳನ್ನು ಆಸುಪಾಸಿನ ಶಾಲೆಗಳಿಗೆ ಭರ್ತಿ ಮಾಡಿಸುವಂತೆ ಮಕ್ಕಳ ಪೋಷಕರಿಗೆ ಹೇಳಬೇಕಾಗಿದೆ. ಶಿಕ್ಷಕರಲ್ಲಿ ಹೊಂದಾಣಿಕೆ ಇಲ್ಲದೆ ನಿರ್ಲಕ್ಷ್ಯ ತೋರಿದ್ದಾರೆ. ಎಂಪಿಎಂ ಆಡಳಿತದ ಅಧಿಕಾರಿಗಳಿಗೆ ಶಾಲೆ ಆಡಳಿತ ನಡೆಸುವ ಅನುಭವ ಇಲ್ಲದ ಕಾರಣ ಶಾಲೆ ಮುಚ್ಚುವ ಸ್ಥಿತಿ ತಲುಪಿದೆ ಎನ್ನುತ್ತಾರೆ ಹಲವರು. ಒಟ್ಟಾರೆ ಮಧುಸೂಧನ್ ಈಗ ಹೋರಾಟದ ಕಿಚ್ಚು ಹಬ್ಬಿಸಿದ್ದು, ಈ ಹೋರಾಟ ಯಶಸ್ವಿಯಾಗಲಿ ಎಂಬುದು ನಮ್ಮೇಲ್ಲರ ಆಶಯ.
…
ಈಗಾಗಲೇ ಎಪಿಎಂ ಶಾಲೆ ಮುಚ್ಚಬೇಡಿ ಎಂದುಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧುಬಂಗಾರಪ್ಪರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ..ಶಾಲೆ ತೆರೆದು ಬಡ ಮಕ್ಕಳಿಗೆ ಉಪಯೋಗವಾಗಲು ಹೋರಾಟ ನಡೆಯಲಿದ್ದು, ನಿರಂತರ ಹೋರಾಟ ನಡೆಯಲಿದೆ.
-ಮಧುಸೂಧನ್ ಭದ್ರಾವತಿ, ಹೋರಾಟಗಾರ