


ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು
...
ದಾವಣಗೆರೆ : ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಜುಲೈ 15 ರೊಳಗೆ ಡ್ಯಾಂ ತುಂಬುವ ಎಲ್ಲ ಸಾಧ್ಯತೆ ಇದೆ.
ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ 40 ವರ್ಷಗಳ ನಂತರ ಈ ಬಾರಿ ಜೂನ್ ಅಂತ್ಯಕ್ಕೆ ಅತಿಹೆಚ್ಚಿನ ನೀರಿನ ಸಂಗ್ರಹವಾಗಿದೆ. ಈ ಹಿಂದೆ 1995ರ ಜೂನ್ 30ರಂದು 158.1 ಅಡಿ ನೀರು ಶೇಖರಣೆಗೊಂಡಿತ್ತು. ಈ ಬಾರಿ (2025ರ ಜೂನ್ 30ಕ್ಕೆ) 162.9 ಅಡಿ ನೀರು ಸಂಗ್ರಹಗೊಂಡಿದೆ.

ಸದ್ಯ (ಜುಲೈ 4) ಜಲಾಶಯದಲ್ಲಿ ನೀರಿನಮಟ್ಟ 167.1 ಅಡಿ ಇದ್ದು, ಮಳೆ ಇನ್ನಷ್ಟು ಬಿರುಸುಗೊಂಡಿರುವುದರಿಂದ ಒಳಹರಿವು ಹೆಚ್ಚಳವಾಗಿದೆ.

ಕಳೆದ ವರ್ಷ ಎಷ್ಟೀತ್ತು
ಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ (2024ರ ಜುಲೈ 4) 127 ಅಡಿ ನೀರು ಸಂಗ್ರಹವಿತ್ತು. 4,908 ಕ್ಯುಸೆಕ್ ಒಳಹರಿವು ಇತ್ತು. ಈ ವರ್ಷ 40 ಅಡಿಯಷ್ಟು ಅಧಿಕ ಪ್ರಮಾಣದ ನೀರು ಸಂಗ್ರಹಗೊಂಡಿದೆ. 21,982 ಕ್ಯುಸೆಕ್ ಒಳಹರಿವು ಇದ್ದು, ಜಲಾಶಯ ಭರ್ತಿ ಆಗಲು 19 ಅಡಿಯಷ್ಟೇ ಬಾಕಿ ಇದೆ.
ಮಳೆಗಾಲದ ಆರಂಭದಲ್ಲಿಯೇ ಜಲಾಶಯ ಭರ್ತಿ ಆಗುತ್ತಿರುವ ಕಾರಣ ಸದ್ಯ 3,394 ಕ್ಯುಸೆಕ್ ನೀರನ್ನು ಪವರ್ಹೌಸ್ ಮೂಲಕ ನದಿಗೆ ಹರಿಸಲಾಗುತ್ತಿದೆ.
ಆಗಸ್ಟ್ ಮೊದಲ ವಾರ ಕಾಲುವೆಗೆ ನೀರು?
ಈ ಬಾರಿ ಎಡದಂಡೆ ಕಾಲುವೆಗೆ ಹೊಸ ಗೇಟ್ ಅಳವಡಿಕೆ ಕಾರ್ಯ ನಡೆದಿದೆ. ಇನ್ನೊಂದೆಡೆ ಕುಡಿಯುವ ನೀರಿನ ಕಾಮಗಾರಿಗೆ ಒಡೆಯಲಾಗಿದ್ದ ಬಲದಂಡೆ ಕಾಲುವೆಯ ದುರಸ್ತಿ ಕಾರ್ಯವೂ ಭರದಿಂದ ನಡೆಯುತ್ತಿದೆ.‘ವಾರದೊಳಗೆ ಬಲದಂಡೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಬಿಆರ್ಪಿಯಲ್ಲಿ ವಿಪರೀತ ಮಳೆ ಬರುತ್ತಿರುವುದರಿಂದ ಕೆಲಸ 10 ದಿನಗಳಲ್ಲಿ ಮುಗಿಯಬಹುದು. ಆಗಸ್ಟ್ ಮೊದಲ ವಾರದಲ್ಲಿ ಬಲದಂಡೆ ಕಾಲುವೆಯಲ್ಲಿ ನೀರು ಹರಿಸಲು ಸಿದ್ಧತೆ ನಡೆದಿದೆ. ಅಷ್ಟರೊಳಗೆ ಐಸಿಸಿ ಸಭೆ ಕರೆದು ದಿನಾಂಕ ನಿಗದಿಗೊಳಿಸುವಂತೆ ಕಾಡಾ ಆಡಳಿತಕ್ಕೆ ಮನವಿ ಮಾಡಲಾಗಿದೆ’ ಎಂದು ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಇದೆ.
‘ಶೀಘ್ರ ನದಿಗೆ ನೀರು ಬಿಡುಗಡೆ’
ಸುರಕ್ಷತೆ ದೃಷ್ಟಿಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿರುತ್ತದೆ. ಈಗಿನ ಮಳೆ, ಒಳಹರಿವು ಗಮನಿಸಿದರೆ ಜಲಾಶಯ ಬೇಗನೇ ಭರ್ತಿ ಆಗುವ ಸಾಧ್ಯತೆ ಇದೆ. ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲಾದರೂ ಹೆಚ್ಚುವರಿ ನೀರನ್ನು ಸ್ಪಿಲ್ ವೇ ಗೇಟ್ ಮುಖಾಂತರ ನದಿಗೆ ಬಿಡಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ. ಒಟ್ಟಾರೆ ಈ ಬಾರಿ ಬೇಗನೇ ಜಲಾಶಯದ ಸೊಬಗನ್ನು ನೋಡಬಹುದಾಗಿದೆ.
1 Comment
Super