
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದ್ದು, ಜೂ.4ರಂದು ನಡೆಯುವ ಮತ ಎಣಿಕೆ ವೇಳೆ ಮತ ಎಣಿಕೆಗೆ ಹೋಗುವ ಕಾರ್ಯಕರ್ತರು ಜಾಗ್ರತೆ ವಹಿಸಬೇಕು ಎಂದು ಸಂಸದಜಿ.ಎಂ.ಸಿದ್ದೇಶ್ವರ ಕರೆ ನೀಡಿದ್ದಾರೆ. ನಗರದ ವಾಣಿ ಹೊಂಡಾ ಶೋ ರೂಂ ಆವರಣದಲ್ಲಿ ಬಿಜೆಪಿ ಲೋಕಸಭಾ ಕ್ಷೇತ್ರದ ಪ್ರಚಾರ ಕಾರ್ಯಾಲಯದಲ್ಲಿ ಪಕ್ಷದ ಮತ ಎಣಿಕೆ ಏಜೆಂಟರು, ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಬಿಜೆಪಿ ಗೆಲ್ಲಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ, ದೇಶದ ಸುಭದ್ರತೆ, ಎಲ್ಲಾ ವರ್ಗದ ಜನರ ಹಿತ ಕಾಯುವ ಬಿಜೆಪಿ ಆಡಳಿತವನ್ನು ಮೆಚ್ಚಿ, ದಾವಣಗೆರೆ ಸೇರಿದಂತೆ ದೇಶದ ಮತದಾರರು ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲಿಸಿ, ಆಶೀರ್ವದಿಸಿದ್ದಾರೆ. ಮುಂದಿನ ಹಂತದ ಚುನಾವಣೆಯಲ್ಲೂ ಬಿಜೆಪಿಗೆ ಮೈತ್ರಿ ಕೂಟಕ್ಕೆ ಆಶೀರ್ವದಿಸಲಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ಸಿನವರು ತಾವೇ ಗೆಲ್ಲುವುದಾಗಿ ಬೆಟ್ಟಿಂಗ್ ಕಟ್ಟುವುದಾಗಿ ಹೇಳುತ್ತಿದ್ದಾರೆ. ನೀವ್ಯಾರೂ ಕಾಂಗ್ರೆಸ್ಸಿನವರ ಬಳಿ ಹಣ ಪಣವಾಗಿ ಕಟ್ಟಲು ಹೋಗಬೇಡಿ. ಅಂತಹರ ಕೈಗೆ ಹಣ ಕೊಟ್ಟರೆ, ವಾಪಾಸ್ಸಂತೂ ಬರುವುದಿಲ್ಲ. ಕಾಂಗ್ರೆಸ್ಸಿನವರ ಇಂತಹ ಮಾತುಗಳೆಲ್ಲಾ ಕೇವಲ ಹೇಳಿಕೆಗಷ್ಟೇ ಸೀಮಿತ. ಕಾಂಗ್ರೆಸ್ಸಿನವರು ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿರುವುದೆಲ್ಲಾ ಜೂ.4ರಂದು ಸುಳ್ಳಾಗಲಿದೆ.
ಬಿಜೆಪಿಯೇ ಇಲ್ಲಿ ಗೆಲ್ಲಲ್ಲಿದ್ದು, ಅಪ್ಪಿತಪ್ಪಿ ಕಾಂಗ್ರೆಸ್ಸಿಗರ ಮಾತಿಗೆ ಕಿವಿಕೊಟ್ಟು, ಹಣ ಕೊಡಬೇಡಿ ಎಂದು ಅವರು ಕಿವಿಮಾತು ಹೇಳಿದರು. ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ತಮ್ಮ ತಾಲೂಕಿನಿಂದ ಕನಿಷ್ಟ 20 ಸಾವಿರ ಲೀಡ್ ಕೊಡಿಸುತ್ತೇವೆ. ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಬಿಜೆಪಿಗೆ 20 ಸಾವಿರಕ್ಕಿಂತ ಹೆಚ್ಚು ಮುನ್ನಡೆಯನ್ನುಕೊಡಿಸುವ ಮೂಲಕ ಫಲಿತಾಂಶದಲ್ಲೂ ತಮ್ಮ ಕ್ಷೇತ್ರದ ಪ್ರಮುಖ ಪಾತ್ರ ವಹಿಸಲಿದೆ ಎಂದರು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ಹಿಂದೆ ಕಾಂಗ್ರೆಸ್ಸಿನವರು ಫಲಿತಾಂಶ ಘೋಷಣೆಗೂ ಮುನ್ನವೇ ತಾವೇ ಗೆದ್ದೆವೆಂದು ಪಟಾಕಿ ಸಿಡಿಸಿದ್ದ ಇತಿಹಾಸವಿದೆ. ಅಂತಿಮವಾಗಿ ಇಲ್ಲಿ ಗೆಲುವು ಮತ್ತೆ ಬಿಜೆಪಿಯದ್ದೇ ಆಗಲಿದೆ.

ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವ, ಬಿಜೆಪಿ ದೇಶದ ಭದ್ರತೆ, ರಕ್ಷಣೆ, ಅಭಿವೃದ್ಧಿ, ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ದೇಶದ ಸರ್ವಾಂಗೀಣವಾಗಿ ಮುನ್ನಡೆಸುತ್ತಿರುವುದನ್ನು ಗಮನಿಸಿ, ಮತ್ತೆ ಮತದಾರರು ಮೋದಿಯವರ ಸುರಕ್ಷಿತ ಕೈಗೆ ಆಡಳಿತ ಚುಕ್ಕಾಣಿ ನೀಡಲಿದ್ದಾರೆ. ನಮ್ಮ ಪಕ್ಷದ ಕೆಲವರನ್ನು ಕಾಂಗ್ರೆಸ್ ಸೆಳೆದಿರಬಹುದು. ಹಣವನ್ನು ಮತದಾರರಿಗೆ ಹಂಚಿರಬಹುದು. ಆದರೆ, ಮತದಾರರ ಆಶೀರ್ವಾದ ಬಿಜೆಪಿ ಮೇಲಿದೆ ಎಂದು ತಿಳಿಸಿದರು. ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ತಮ್ಮ ತಾಲೂಕಿನಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ, ತಾವು ಸೇರಿದಂತೆ ಎಲ್ಲಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ಗೆಲುವಿಗೆ ಶ್ರಮಿಸಿದ್ದು, ಇಡೀ ಕ್ಷೇತ್ರದ ಮತದಾರರ ಆಶೀರ್ವಾದ ಬಿಜೆಪಿ ಮೇಲಿದೆ. ಸಂಸದ ಜಿ.ಎಂ.ಸಿದ್ದೇಶ್ವರ ಸ್ಥಾನವನ್ನು ಲೋಕಸಭೆಯಲ್ಲಿ ಗಾಯತ್ರಿ ಸಿದ್ದೇಶ್ವರ ಪ್ರತಿ
ನಿಧಿಸುವುದು ಶತಃಸಿದ್ಧ. ಇದು ದಾವಣಗೆರೆ ಮತದಾರರ ತೀರ್ಪು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಸವರಾಜ ನಾಯ್ಕ, ಯಶವಂತ ರಾವ್ ಜಾಧವ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳ್, ಅನಿಲನಾಯ್ಕ, ಅಣ್ಣೇಶ ಐರಣಿ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಜಗಳೂರು ಅಧ್ಯಕ್ಷ ಮಹೇಶ ಪಲ್ಲಾಗಟ್ಟೆ, ಕೊಟ್ರೇಶ ಗೌಡ, ಫಣಿಯಾಪುರ ಲಿಂಗರಾಜ, ಮುರುಗೇಶ ಆರಾಧ್ಯ, ಬಿ.ಎಸ್.ಜಗದೀಶ, ಶಿವನಗೌಡ ಪಾಟೀಲ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಯುವಕರು ಇದ್ದರು.