ಶಿವಮೊಗ್ಗ: ತಮ್ಮ ಈಶ್ವರ ವನದ ಜಾಗದಲ್ಲಿ ತಾವು ಪರಿಸರ ಕಾಳಜಿಯಿಂದ ನೆಟ್ಟು ಜತನದಿಂದ ಬೆಳೆಸಿದ ಅಮೂಲ್ಯವಾದ ಗಿಡಗಳನ್ನು ಮೆಸ್ಕಾಂ ಸಿಬ್ಬಂದಿಗಳು ಅಕ್ರಮ ಪ್ರವೇಶ ಮಾಡಿ ಬುಡ ಸಮೇತ ಕಡಿದು ಹಾಕಿ ಹಾನಿ ಮಾಡಿದ್ದು ಖಂಡನೀಯ ಎಂದು ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗೇಶ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ.11ರಂದು ‘ಅಬ್ಬಲಗೆರೆಯ ತಮ್ಮ ಈಶ್ವರವನದ ಮುಂಭಾಗದ ರಸ್ತೆ ಬದಿಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮರಗಳನ್ನು ನೆಲಸಮ ಮಾಡಿರುವುದಲ್ಲದೇ ಅಕ್ರಮವಾಗಿ ಈಶ್ವರವನದ ಒಳಗೆ ಪ್ರವೇಶ ಮಾಡಿ ವಿದ್ಯುತ್ ಕಂಬಕ್ಕೆ ಸಂಬಂಧವಿರದ ಅತಿ ದೂರದ ಮರಗಳನ್ನೂ ಕಡಿದಿರುವುದು ಮೆಸ್ಕಾಂ ಸಿಬ್ಬಂದಿಯ ಹಾಗೂ ಆದೇಶ ಮಾಡಿದ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಎಂದು ಸಿಡಿಮಿಡಿಗೊಂಡರು.
ಈ ಕಾರ್ಯ ನಿರ್ವಹಿಸಲು ಅಗತ್ಯ ಸಲಕರಣೆಗಳ ಉಪಯೋಗ ಮಾಡಿಕೊಳ್ಳದೇ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮನಸೋಯಿಚ್ಛೆ ಮರಗಳನ್ನು ಕಡಿದು ಧರೆಗುರುಳಿಸಿದ್ದಾರೆ. ಇದನ್ನು ನೋಡಿದರೆ ಈ ಮೆಸ್ಕಾಂ ಸಿಬ್ಬಂದಿಯ ಕಟುಕತನಕ್ಕೆ ಬೇರೆ ಸಾಟಿಯಿಲ್ಲ ಎಂದು ಹರಿಹಾಯ್ದರು.
ಈ ಕಡಿತಲೆಗೆ ಒಳಗಾದ ಮರಗಳಲ್ಲಿ ಬಿಲ್ಯಾರಾ, ಬೇವು, ಸಪ್ತಪರ್ಣಿ, ನುಗ್ಗೆ, ಸಾಗುವಾನಿ, ಹೊಂಗೆ ಇತ್ಯಾದಿ ಜಾತಿಯ ಮರಗಳಿದ್ದು ಬಿದಿರಿನ ಕಡಿತಲೆಗೆ ಅರಣ್ಯ ಇಲಾಖೆಯ ನಿಷೇಧವಿದ್ದರೂ ಬಿದಿರು ಕುಡಿಗಳನ್ನು ಕಡಿದು ಒಂದು ಕುಡಿಯನ್ನೂ ಬಿಡದಂತೆ ಸಾಗಾಟ ಮಾಡಿರುತ್ತಾರೆ ಎಂದು ಆರೋಪಿಸಿದರು.
ಅನಗತ್ಯವಾಗಿ, ಅನಧಿಕೃತವಾಗಿ ಮರಗಳ ಮಾರಣ ಹೋಮ ಮಾಡಿರುವ ಕುರಿತು ಮೆಸ್ಕಾಂ ವಿರುದ್ಧ ದೂರು ಸಲ್ಲಿಸಿರುವುದಾಗಿಯೂ ಅವರು ಮಾಹಿತಿ ನೀಡಿದರು.
ಕಳೆದ ಏಳು ವರ್ಷಗಳಿಂದ ಅಬ್ಬಲಗೆರೆಯ ಈಶ್ವರವನದಲ್ಲಿ 150ಕ್ಕೂ ಹೆಚ್ಚಿನ ಜಾತಿಯ 1000ಕ್ಕೂ ಅಧಿಕ ಅಳಿವಿನಂಚಿನಲ್ಲಿರುವ ಮರಗಳನ್ನು ಬೆಳೆಸಲಾಗಿದೆ. ಪ್ರಕೃತಿ ಆರಾಧನೆಯ ಪ್ರತೀಕವಾಗಿ ಪ್ರತಿವರ್ಷ ಶಿವರಾತ್ರಿಯಂದು ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನೂ ನಡೆಸುತ್ತಿದ್ದೇವೆ. ಸಾರ್ವಜನಿಕರಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಾಪಾಡಿಕೊಳ್ಳುವುದರ ಮಹತ್ವ ಕುರಿತು ಜನಜಾಗೃತಿ ಮೂಡಿಸುವ ಸತ್ಕಾರ್ಯಗಳಿಗೆ ಈಶ್ವರವನ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಪ್ರಕೃತಿಯ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಜೀವನ, ಶಾಲಾ ಮಕ್ಕಳಿಗೆ ಪರಿಸರ ಶಿಕ್ಷಣ ಬೋಧನೆ, ಪೃಕೃತಿ ಪೂರಕ ಹಬ್ಬಗಳ ಆಚರಣೆಯ ಮಹತ್ವ ಸಾರುವ ಕೆಲಸಗಳನ್ನು ನಡೆಸಿಕೊಂಡು ಬರುತ್ತಿರುವುದು ಈಶ್ವರವನದ ಹೆಗ್ಗಳಿಕೆಯಾಗಿದೆ. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರಿಗಿಂತ ಸರ್ಕಾರಗಳ ಹಾಗೂ ಅಂಗಸಂಸ್ಥೆಗಳ ಪಾತ್ರ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮೆಸ್ಕಾಂ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ತನ್ನ ಬೇಜವಾಬ್ದಾರಿತನ ತೋರಿದ್ದರ ಪರಿಣಾಮ ಸುಮಾರು ಇಪ್ಪತ್ತೈದಕ್ಕೂ ಹೆಚ್ಚಿನ ಅಳಿವಿನಂಚಿನ ಮರಗಳು ಪ್ರಾಣತ್ಯಾಗ ಮಾಡಿವೆ.
ವಿದ್ಯುತ್ ತಂತಿಗಳಿಗೆ ಸಮೀಪ ಬೆಳೆದಿರುವ ರೆಂಬೆ ಕೊಂಬೆಗಳನ್ನು ಟ್ರಿಮ್ ಮಾಡುವ ನೆಪದಲ್ಲಿ ಬುಡ ಸಮೇತ ಕಡಿತಲೆ ಮಾಡಿರುವ ಮೆಸ್ಕಾಂ ಸಿಬ್ಬಂದಿಯ ಹೊಣೆಗೇಡಿತನವನ್ನು ತಾವು ಉಗ್ರವಾಗಿ ಖಂಡಿಸುವುದಾಗಿ ಹೇಳಿದರು.
ಇಲಾಖಾ ನಿಯಮದನ್ವಯ ವಿದ್ಯುತ್ ತಂತಿಗಳ ಬಳಿ ಚಾಚಿಕೊಂಡಿರುವ ಟೊಂಗೆಗಳನ್ನು ಮಾತ್ರ ಕಡಿಯಲು ಅವಕಾಶವಿದ್ದರೂ ಅಳಿವಿನಂಚಿನ ಮರಗಳೆಂದೂ ಲೆಕ್ಕಿಸದೇ ನೆಲಮಟ್ಟದವರೆವಿಗೆ ಕಡಿದಿರುತ್ತಾರೆ. ಈ ಸಂಬಂಧಅರಣ್ಯ ಇಲಾಖೆಗೆ ದೂರು ನೀಡುವುದಾಗಿ ತಿಳಿಸಿದರು.
ಪಕೃತಿಯ ಋಣ ತೀರಿಸುವ ಭಾಗವಾಗಿ ಹುಟ್ಟಿಕೊಂಡ ಈ ಈಶ್ವರವನದ ಅಳಿವಿನಂಚಿನ ಮರಗಳ ಮಾರಣ ಹೋಮ ಮಾಡಿದವರನ್ನು ಇಲಾಖಾ ನಿಯಮಗಳ ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಹಾಗೂ ಮುಂದೆ ಈ ರೀತಿಯ ಅವಘಡಗಳು ನಡೆಯದಂತೆ ಎಚ್ಚರವಹಿಸಬೇಕು. ಈ ಮಾರಣ ಹೋಮದಲ್ಲಿ ಭಾಗಿಯಾದ ಅಧಿಕಾರಿಗಳ ಸಹಿತ ಸಂಬಂಧಪಟ್ಟ ಎಲ್ಲ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಲುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ಶೆಟ್ಟರ್, ಪರಿಸರ ರಮೇಶ, ಜನಾರ್ಧನ ಪೈ ಮೊದಲಾದವರಿದ್ದರು.